ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಜೈಲೇ ಸರಿಯಾದ ಸ್ಥಳ ಎಂದು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಬಿಹಾರ ಚುನಾವಣೆಗೆ ಎರಡೇ ದಿನಗಳು ಬಾಕಿ ಉಳಿದಿರುವಂತೆ ತಮ್ಮ ಪ್ರಚಾರ ಕಾರ್ಯ ಮುಂದುವರೆಸಿರುವ ಚಿರಾಗ್ ಪಾಸ್ವಾನ್ ಈ ವೇಳೆ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ, ಚಿರಾಗ್ ಪಾಸ್ವಾನ್, ಭ್ರಷ್ಠ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಜೈಲು ಸರಿಯಾದ ಸ್ಥಳ' ಎಂದು ನಾನು ನಂಬಿದ್ದೇನೆ. 'ನಿತೀಶ್ ಕುಮಾರ್ ಅವರು ಹಗರಣಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
'ಒಂದು ವೇಳೆ ಅವರು ತಪ್ಪಿತಸ್ಥರಾಗಿದ್ದರೆ, ತನಿಖೆಯ ನಂತರ ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ನಾನು ಹೇಳಿದೆ. ದೊಡ್ಡ ಪ್ರಮಾಣದ ಹಗರಣಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗೆ ತಿಳಿದಿಲ್ಲ ಎಂಬುದು ಹೇಗೆ ಸಾಧ್ಯ? ಅವರು ಅದರಲ್ಲಿ ಭಾಗಿಯಾಗಿದ್ದಾರೆ. ಇಲ್ಲದಿದ್ದರೆ ಅದು ತನಿಖೆಯಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಅವರು ಭಾಗಿಯಾಗಿದ್ದಾರೆ, ಅವರು ಭ್ರಷ್ಟರಾಗಿದ್ದಾರೆ ಮತ್ತು ಯಾವುದೇ ಭ್ರಷ್ಟಾಚಾರಿಯಾದರೂ ಆತ ಜೈಲಿಗೆ ಸೇರಿದವನು ಎಂದು ಜನರು ಮತ್ತು ನಾನು ನಂಬಿದ್ದೇವೆ. ಯಾವುದೇ ಭ್ರಷ್ಟ ನಾಯಕನನ್ನು ಮುಕ್ತವಾಗಿ ತಿರುಗಾಡಲು ಬಿಡಬಾರದು. ನಿತೀಶ್ ಕುಮಾರ್ ಅವರಿಗೆ ಜೈಲು ಸರಿಯಾದ ಸ್ಥಳ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
Advertisement