ಅಹಂಕಾರ, ಅಧಿಕಾರದಿಂದ ಬಿಹಾರ ಸರ್ಕಾರ ತನ್ನ ಹಾದಿಯಿಂದ ವಿಮುಖವಾಗಿದೆ: ನಿತೀಶ್ ವಿರುದ್ದ ಸೋನಿಯಾ ಕಿಡಿ

ಅತಿಯಾದ ಅಹಂಕಾರ ಮತ್ತು ಅಧಿಕಾರದಿಂದಾಗಿ ಬಿಹಾರ ಸರ್ಕಾರ ತನ್ನ ಹಾದಿಯಿಂದ ವಿಮುಖವಾಗಿದೆ ಎಂದು ನಿತೀಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಅತಿಯಾದ ಅಹಂಕಾರ ಮತ್ತು ಅಧಿಕಾರದಿಂದಾಗಿ ಬಿಹಾರ ಸರ್ಕಾರ ತನ್ನ ಹಾದಿಯಿಂದ ವಿಮುಖವಾಗಿದೆ ಎಂದು ನಿತೀಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಆದರೆ ರಾಜ್ಯದ ಜನತೆ ಕಾಂಗ್ರೆಸ್ ನ ಮಹಾಘಟ ಬಂಧನದ ಜೊತೆ ಇದ್ದಾರೆ ಎಂದು ಸೋನಿಯಾ ತಿಳಿಸಿದ್ದಾರೆ. 

ರಾಜ್ಯದ ಆರ್ಥಿಕತೆಯ ದುರ್ಬಲ ಸ್ಥಿತಿಯಿಂದಾಗಿ ಜನರ ಜೀವನವು ಕಷ್ಟದಲ್ಲಿ ಸಿಲುಕಿದೆ. ಮಣ್ಣಿನ ಮಕ್ಕಳು ಇಂದು ತೀವ್ರ ತೊಂದರೆಯಲ್ಲಿದ್ದಾರೆ. ದಲಿತರು ಕೆಟ್ಟ ಸ್ಥಿತಿಯಲ್ಲಿದ್ದಾರೆ. ಸಮಾಜದ ಹಿಂದುಳಿದ ವರ್ಗಗಳೂ ಕೂಡ ಈ ಅವಸ್ಥೆಗೆ ಬಲಿಯಾಗುತ್ತಿವೆ ಎಂದು ಹೇಳಿದ್ದಾರೆ. ಈಗ ಬದಲಾವಣೆ ಗಾಳಿಯಲ್ಲಿದೆ. ಏಕೆಂದರೆ ಬದಲಾವಣೆ ಎಂದರೆ ಉತ್ಸಾಹ, ಶಕ್ತಿ, ಹೊಸ ಆಲೋಚನೆ ಮತ್ತು ಅಧಿಕಾರ. ಈಗ ಹೊಸದನ್ನು ಬರೆಯುವ ಸಮಯ ಬಂದಿದೆ. ಬಿಹಾರದ ಜನರ ಕೈಗಳು ಕೌಶಲ್ಯ, ಶಕ್ತಿ, ನಿರ್ಮಾಣದ ಶಕ್ತಿಯ ಗುಣಗಳನ್ನು ಹೊಂದಿದೆ. ಆದರೆ ನಿರುದ್ಯೋಗ, ವಲಸೆ, ಹಣದುಬ್ಬರ, ಹಸಿವಿನಿಂದಾಗಿ ಕಣ್ಣೀರು ಮತ್ತು ಅವರ ಕಾಲುಗಳಲ್ಲಿ ಗುಳ್ಳೆಗಳು ಎದ್ದಿವೆ ಎಂದು ದೂರಿದ್ದಾರೆ.

ಬಿಹಾರವು ಭಾರತದ ಕನ್ನಡಿ, ಭರವಸೆ. ಬಿಹಾರವೆನ್ನುವುದು ಹೆಮ್ಮೆ ಮತ್ತು ಭಾರತದ ಹೆಮ್ಮೆಯಾಗಿದೆ ಎಂದು ತಿಳಿಸಿದ್ದಾರೆ. ರೈತರು, ಯುವಕರು, ಕಾರ್ಮಿಕರು, ಬಿಹಾರದ ಸಹೋದರ ಸಹೋದರಿಯರು ಬಿಹಾರದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಇದ್ದಾರೆ. ಇಂದು, ಅದೇ ಬಿಹಾರವು ತನ್ನ ಹಳ್ಳಿಗಳು, ಪಟ್ಟಣಗಳು, ನಗರಗಳು, ಹೊಲಗಳು ಮತ್ತು ಕಣಜದಲ್ಲಿ ಹೊಸ ವೈಭವ ಮತ್ತು ಭವಿಷ್ಯಕ್ಕಾಗಿ ಹೊಸ ಬದಲಾವಣೆಗಳಿಗೆ ಸಿದ್ಧವಾಗಿದೆ. ಅದಕ್ಕಾಗಿಯೇ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ನಾನು ಹೇಳಿದೆ. ಮತ ಚಲಾಯಿಸುವ ಶಾಯಿಯ ಬೆರಳು ಈಗ ಪ್ರಶ್ನೆಯೊಂದಿಗೆ ನಿಂತಿದೆ ಎಂದು ಹೇಳಿದ್ದಾರೆ.

ಬಿಹಾರ ಇಂದು ಬಿಕ್ಕಟ್ಟಿನಲ್ಲಿದೆ. ದಲಿತರು, ಹಿಂದುಳಿದ ಜನರು ನಿರಂತರ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. ಬಿಹಾರ ಮತ್ತು ಕೇಂದ್ರದಲ್ಲಿರುವ ಸರ್ಕಾರ ಬ್ಯಾನ್‌ ಸರ್ಕಾರಗಳಾಗಿವೆ. ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ನೋಟ್‌ ಬ್ಯಾನ್‌, ಲಾಕ್‌ಡೌನ್ ಮಾತ್ರ ಅವರಿಗೆ ತಿಳಿದಿದೆ ಎಂದು ಸೋನಿಯಾ ಗಾಂಧಿ ತಮ್ಮ ಐದು ನಿಮಿಷಗಳ ಸುದೀರ್ಘ ಭಾಷಣದಲ್ಲಿ ಆರೋಪಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com