ನವದೆಹಲಿ: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸಿದೆ. ಕೇಸಿಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಸಿಬಿಐ ತನ್ನ ಸ್ಥಿತಿ ವರದಿಯನ್ನು ಅಲಹಾಬಾದ್ ಕೋರ್ಟ್ ಗೆ ಸಲ್ಲಿಸಲಿದೆ.
ಹತ್ರಾಸ್ ಕೇಸಿಗೆ ಸಂಬಂಧಪಟ್ಟಂತೆ ಸಂತ್ರಸ್ತೆಯ ಕುಟುಂಬಸ್ಥರು ಮತ್ತು ಸಾಕ್ಷಗಳಿಗೆ ನೀಡಿರುವ ಭದ್ರತೆ ಸೇರಿದಂತೆ ಎಲ್ಲಾ ಆಯಾಮಗಳ ಕುರಿತು ಅಲಹಾಬಾದ್ ಹೈಕೋರ್ಟ್ ಇನ್ನು ಮುಂದೆ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಸಿಬಿಐ ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಿತಿ ವರದಿಯನ್ನು ಸಲ್ಲಿಸಲಿದೆ ಎಂದು ಕೋರ್ಟ್ ತಿಳಿಸಿದೆ.
ಸಿಬಿಐ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ನಿರ್ವಹಿಸಲಿದ್ದು, ಹತ್ರಾಸ್ ಕೇಸಿನ ವಿಚಾರಣೆಯನ್ನು ದೆಹಲಿಗೆ ವರ್ಗಾಯಿಸುವ ವಿಚಾರದಲ್ಲಿ ತನಿಖೆಯನ್ನು ಸಿಬಿಐ ಮುಗಿಸಿ ನಂತರ ಅದು ನಿರ್ಧರಿಸುವುದು ಉತ್ತಮ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠ ತಿಳಿಸಿದೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಆಗಿ ತೀವ್ರವಾಗಿ ಗಾಯಗೊಂಡ ನಂತರ ಆಕೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ನಂತರ ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಸಿಬಿಐಗೆ ಪ್ರಕರಣವನ್ನು ಸರ್ಕಾರ ವಹಿಸಿತ್ತು.
ಆಗ ಇದು ಉತ್ತರ ಪ್ರದೇಶದಲ್ಲಿ ಸರಿಯಾಗಿ ವಿಚಾರಣೆ ನಡೆದು ಸಂತ್ರಸ್ತ ಮಹಿಳೆಯ ಕುಟುಂಬಸ್ಥರಿಗೆ ನ್ಯಾಯ ದೊರಕಲು ಸಾಧ್ಯವಿಲ್ಲ, ಇದನ್ನು ಸುಪ್ರೀಂ ಕೋರ್ಟ್ ನಡೆಸಬೇಕೆಂದು ಕೆಲವು ಕಾರ್ಯಕರ್ತರು ಮತ್ತು ವಕೀಲರು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಕ್ಟೋಬರ್ 15ರಂದು ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ನೀಡಿ ಸಂಪೂರ್ಣವಾಗಿ ಕೇಸಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸಿದೆ.
Advertisement