ಲೇಹ್(ಲಡಾಕ್):ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಗುರುವಾರ ಲಡಾಕ್ ನ ಅತಿದೊಡ್ಡ ನಗರ ಲೇಹ್ ತಲುಪಿದ್ದಾರೆ. ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ ಬಳಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಬಗ್ಗೆ, ಅಲ್ಲಿನ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಲು ಸೇನಾ ಮುಖ್ಯಸ್ಥರು ಲೇಹ್ ಗೆ ತೆರಳಿದ್ದಾರೆ.
ಗಡಿಯಲ್ಲಿ ಮತ್ತೆ ಉಲ್ಭಣಗೊಂಡಿರುವ ಸ್ಥಿತಿಗತಿ ಬಗ್ಗೆ ಅವರಿಗೆ ಹಿರಿಯ ಕಮಾಂಡರ್ ಗಳು ವಿವರಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಸೇನಾ ಮುಖ್ಯಸ್ಥರು ಎರಡು ದಿನಗಳ ಭೇಟಿಯಲ್ಲಿದ್ದು ಕಳೆದ ಮೂರು ತಿಂಗಳಿನಿಂದ ಗಡಿಯಲ್ಲಿ ಬಂಧಿಯಾಗಿ ನಿಲುಗಡೆಯಾಗಿರುವ ಭಾರತ ಸೇನೆಯ ಯೋಧರು ಕಾರ್ಯಾಚರಣೆಗೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಸೇನಾ ಮುಖ್ಯಸ್ಥರು ಮಾಹಿತಿ ಪಡೆಯಲಿದ್ದಾರೆ.
ಮೊನ್ನೆ ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿಯಲ್ಲಿ ಲಡಾಖ್ನ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೊ ಬಳಿ ಚೀನಾ ಸೈನಿಕರು ಭಾರತದ ಪ್ರದೇಶಗಳಿಗೆ ಅತಿಕ್ರಮಣ ಪ್ರವೇಶ ಮಾಡಲು ಸಂಚು ನಡೆಸಿದ್ದರು. ಈ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಈ ಹಿನ್ನೆಲೆಯಲ್ಲಿ, ಇಂದು ಸೇನಾ ಮುಖ್ಯಸ್ಥರು ಭೇಟಿಯಾಗಿದ್ದು, ಅಲ್ಲಿ ಏನು ಮಾಹಿತಿ ಪಡೆಯುತ್ತಾರೆ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮತ್ತು ಸೇನೆ ಒಟ್ಟಾಗಿ ಏನು ನಿರ್ಣಯ ತೆಗೆದುಕೊಳ್ಳಲಿದೆ ಎಂಬ ಕುತೂಹಲವಿದೆ.
Advertisement