ಶ್ರೀನಗರ: ನಮ್ಮ ಪಕ್ಷದ ಹಲವು ಮುಖಂಡರಿಗೆ ಇಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಜಮ್ಮು ಮತ್ತು ಕಾಶ್ಮೀರ ಆಡಳಿತ ಗುರುವಾರ ಅವಕಾಶ ನೀಡಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ)ಯ ವಕ್ತಾರರು ಆರೋಪಿಸಿದ್ದಾರೆ.
"ಪಿಡಿಪಿ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಲೋನ್ ಹಂಜುರಾ ಅವರು ಇಂದು ಪಿಡಿಪಿ ನಾಯಕರ ಸಭೆ ಕರೆದಿದ್ದರು. ಆದರೆ ಇನ್ನು ಅಕ್ರಮವಾಗಿ ಗೃಹ ಬಂಧನದಲ್ಲಿರುವ ಕೆಲನಾಯಕರನ್ನು ಅವರ ಮನೆಗಳಿಂದ ಹೊರ ಬರಲು ಅಧಿಕಾರಿಗಳು ಅನುಮತಿ ನೀಡಿಲ್ಲ ಎಂದು ಪಕ್ಷದ ವಕ್ತಾರ ಸುಹೇಲ್ ಬುಖಾರಿ ಹೇಳಿದ್ದಾರೆ.
ರಾಜಕೀಯ ನಾಯಕರು ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವತಂತ್ರರು ಎಂಬ "ಟೊಳ್ಳಾದ ಹಕ್ಕನ್ನು" ಇದು ಬಹಿರಂಗಪಡಿಸಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯ ನಾಯಕರನ್ನು ಮುಕ್ತಗೊಳಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಂತಹ ಸಂಸ್ಥೆಗಳಿಗೆ ಸುಳ್ಳು ಹೇಳಿದೆ. ಈಗ ಸುಳ್ಳುಗಳನ್ನು ಬಹಿರಂಗಪಡಿಸಲಾಗಿದೆ ಎಂದು ಬುಖಾರಿ ಹೇಳಿದ್ದಾರೆ.
ಏತನ್ಮಧ್ಯೆ, ಪಕ್ಷದ ಸಭೆಗಾಗಿ ಪಿಡಿಪಿ ನಾಯಕರು ಮನೆಗಳಿಂದ ಹೊರಗೆ ಹೋಗುವುದನ್ನು ಅನುಮತಿಸದ ಪೊಲೀಸ್ ಕ್ರಮವನ್ನು ಸಿಪಿಐಎಂ ಮುಖಂಡ ಎಂ ವೈ ತಾರಿಗಾಮಿ ಖಂಡಿಸಿದ್ದಾರೆ.
Advertisement