ದ್ವೇಷ ಭಾಷಣ ವಿವಾದ: ಹಲವು ಒತ್ತಡಗಳ ಬಳಿಕ ಬಿಜೆಪಿ ನಾಯಕ ರಾಜಾ ಸಿಂಗ್ ಖಾತೆ ನಿಷೇಧಿಸಿದ ಫೇಸ್'ಬುಕ್
ನವದೆಹಲಿ: ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆ ಕುರಿತು ಸೃಷ್ಟಿಯಾದ ವಿವಾದ ಹಾಗೂ ಚರ್ಚೆಗಳ ಬಳಿಕ ಕೊನೆಗೂ ಒತ್ತಡಗಳಿಗೆ ಮಣಿದಿರುವ ಫೇಸ್ಬುಕ್ ಬಿಜೆಪಿ ನಾಯಕ ಟಿ.ರಾಜಾ ಸಿಂಗ್ ಅವರ ಫೇಸ್'ಬುಕ್ ಹಾಗೂ ಇಸ್ಟಾಗ್ರಾಂ ಖಾತೆಗಳನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ.
ಫೇಸ್ಬುಕ್ನ ದ್ವೇಷ ಭಾಷಣಕ್ಕೆ ಸಂಬಂಧಿಸಿದ ನೀತಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸಿಂಗ್ ಅವರ ಫೇಸ್ಬುಕ್ ಖಾತೆಯನ್ನು ನಿಷೇಧಿಸಲಾಗಿದೆ ಎಂದು ಫೇಸ್ಬುಕ್ ತಿಳಿಸಿದೆ.
"ಫೇಸ್ಬುಕ್ನಲ್ಲಿ ಹಿಂಸೆ ಹಾಗೂ ದ್ವೇಷವನ್ನು ಪ್ರಚೋದಿಸುವುದನ್ನು ತಡೆಯುವ ನಮ್ಮ ನೀತಿಯನ್ನು ಉಲ್ಲಂಘಿಸಿರುವ ರಾಜಾ ಸಿಂಗ್ ಅವರ ಫೇಸ್ಬುಕ್ ಖಾತೆಯನ್ನು ನಾವು ನಿಷೇಧಿಸಿದ್ದೇವೆ. ನಿಯಮ ಉಲ್ಲಂಘಿಸುವವರ ವೌಲ್ಯಮಾಪನ ಪ್ರಕ್ರಿಯೆ ವಿಸ್ತಾರವಾಗಿದೆ. ಈ ಪ್ರಕ್ರಿಯೆ ವೇಳೆ ನಾವು ಈ ನಿರ್ಧಾರ ಕೈಗೊಂಡಿದ್ದೇವೆ'' ಎಂದು ಫೇಸ್ಬುಕ್ ವಕ್ತಾರ 'ವಾಲ್ಸ್ಟ್ರೀಟ್ ಜರ್ನಲ್'ಗೆ ತಿಳಿಸಿದ್ದಾರೆ.
ಸಿಂಗ್ ಸಹಿತ ಇತರ ಬಿಜೆಪಿ ನಾಯಕರ ದ್ವೇಷ ಭಾಷಣವನ್ನು ಭಾರತದಲ್ಲಿರುವ ಫೇಸ್ ಬುಕ್ ನಿರ್ಲಕ್ಷಿಸುತ್ತಿದೆ ಹಾಗೂ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಇದೀಗ ಫೇಸ್ಬುಕ್ ರಾಜಾ ಸಿಂಗ್ ಅವರ ಫೇಸ್ ಬುಕ್ ಖಾತೆಯನ್ನು ನಿಷೇಧಿಸಿದೆ.
ರಾಜಾ ಸಿಂಗ್ ಭಾರತದಲ್ಲಿರುವ ರೋಹಿಂಗ್ಯಾ ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿದ್ದರು. ರೋಹಿಂಗ್ಯಾರನ್ನು ದೇಶದಿಂದ ಹೊರಗಟ್ಟಬೇಕು ಎಂದಿದ್ದರು. 2018ರಲ್ಲಿ ನನ್ನ ಫೇಸ್ಬುಕ್ ಪೇಜ್ನ್ನು ಹ್ಯಾಕ್ ಮಾಡಲಾಗಿತ್ತು ಎಂದು ಸಿಂಗ್ ಹೇಳಿಕೊಂಡಿದ್ದರು.