ಕಲ್ಯಾಣಿ: ಪಬ್ ಜಿ ಗೇಮ್ ಆಡಲು ಸಾಧ್ಯವಾಗದಿದ್ದಕ್ಕೆ ಬೇಸರಗೊಂಡ 21 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.
ಪ್ರೀತಮ್ ಹಾಲ್ದಾರ್ ಐಟಿಐ ವಿದ್ಯಾರ್ಥಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಶುಕ್ರವಾರ ಬೆಳಗ್ಗೆ ಉಪಹಾರ ಸೇವಿಸಿದ ನಂತರ ತನ್ನ ಕೊಠಡಿಗೆ ತೆರಳಿ ಸಾವಿಗೆ ಶರಣಾಗಿದ್ದಾನೆ ಎಂದು ಆತನ ತಾಯಿ ತಿಳಿಸಿದ್ದಾರೆ.
ಮಧ್ಯಾಹ್ನದ ಊಟಕ್ಕಾಗಿ ತಾಯಿ ರತ್ನ ಪ್ರೀತಮ್ ನನ್ನು ಕರೆಯಲು ಹೋಗಿದ್ದಾರೆ, ಕೊಠಡಿ ಒಳಗಿನಿಂದ ಲಾಕ್ ಆಗಿತ್ತು, ಎಷ್ಟು ಸಾರಿ ತಟ್ಟಿದರೂ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದರನ್ನು ಕರೆಸಿ ಬಾಗಿಲು ಮುರಿದು ಒಳ ಹೋಗಿದ್ದಾರೆ. ಆಗ ಆತ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ.
ಪೊಲೀಸರು ಅಸ್ವಾಭಾವಿಕ ಸಾವಿನ ಕೇಸ್ ದಾಖಲಿಸಿಕೊಂಡಿದ್ದಾರೆ. ತಮ್ಮ ಪುತ್ರ ಪಬ್ ಜಿ ಗೇಮ್ ಆಡಲು ಸಾಧ್ಯವಾಗದಿದ್ದಕ್ಕೆ ಅಪ್ ಸೆಟ್ ಆಗಿದ್ದ ಎಂದು ತಾಯಿ ರತ್ನ ತಿಳಿಸಿದ್ದಾರೆ, ರಾತ್ರಿ ವೇಳೆ ಪಬ್ ಜಿ ಗೇಮ್ ಆಡುತ್ತಿದ್ದ. ಆದರೆ ಪಬ್ ಜಿ ಬ್ಯಾನ್ ಮಾಡಿದ ಮೇಲೆ ಆಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಕೆ ತಿಳಿಸಿದ್ದಾರೆ. ಪ್ರೀತಮ್ ತಂದೆ ಬಿಸ್ವಜಿತ್ ಹಾಲ್ದಾರ್ ನಿವೃತ್ತ ಸೇನಾಧಿಕಾರಿ ತಾಯಿ ಗೃಹಿಣಿಯಾಗಿದ್ದಾರೆ.
Advertisement