ಕಾಶ್ಮೀರದ ಈ ಕುಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿದ್ದು ಸ್ವಾತಂತ್ರ್ಯ ಸಿಕ್ಕಿ 73 ವರ್ಷಗಳ ಬಳಿಕ!

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ದುನ್ನಾಡಿ ಅಸ್ತಾನ್ ಎಂಬ ಗ್ರಾಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 7 ದಶಕಗಳು ಕಳೆದರೂ ಇನ್ನೂ ವಿದ್ಯುತ್ ಸೌಕರ್ಯವಿಲ್ಲದೆ ಕತ್ತಲೆಯಲ್ಲಿತ್ತು. ಈ ಗ್ರಾಮದ ಪಕ್ಕ ಇರುವ ಪರ್ವತ ಪ್ರದೇಶಕ್ಕೆ ವಿದ್ಯುತ್ ಸೌಕರ್ಯ ಲಭಿಸಿತ್ತು, ಆದರೆ ಈ ಗ್ರಾಮ ಮಾತ್ರ ಕತ್ತಲೆಯಲ್ಲಿಯೇ ಇತ್ತು.
ಗ್ರಾಮದಲ್ಲಿ ಸ್ಥಾಪಿಸಲಾದ ವಿದ್ಯುತ್ ಟ್ರಾನ್ಸ್ ಫಾರ್ಮರ್
ಗ್ರಾಮದಲ್ಲಿ ಸ್ಥಾಪಿಸಲಾದ ವಿದ್ಯುತ್ ಟ್ರಾನ್ಸ್ ಫಾರ್ಮರ್

ಜಮ್ಮು-ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ದುನ್ನಾಡಿ ಅಸ್ತಾನ್ ಎಂಬ ಗ್ರಾಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 7 ದಶಕಗಳು ಕಳೆದರೂ ಇನ್ನೂ ವಿದ್ಯುತ್ ಸೌಕರ್ಯವಿಲ್ಲದೆ ಕತ್ತಲೆಯಲ್ಲಿತ್ತು. ಈ ಗ್ರಾಮದ ಪಕ್ಕ ಇರುವ ಪರ್ವತ ಪ್ರದೇಶಕ್ಕೆ ವಿದ್ಯುತ್ ಸೌಕರ್ಯ ಲಭಿಸಿತ್ತು, ಆದರೆ ಈ ಗ್ರಾಮ ಮಾತ್ರ ಕತ್ತಲೆಯಲ್ಲಿಯೇ ಇತ್ತು.

ಇಂದು ಸ್ವಾತಂತ್ರ್ಯ ಸಿಕ್ಕಿ 73 ವರ್ಷಗಳಾದ ಬಳಿಕ ಗ್ರಾಮಕ್ಕೆ ವಿದ್ಯುತ್ ನ ಸೌಕರ್ಯ ಸಿಗುತ್ತಿದೆ. ಕಳೆದ ತಿಂಗಳಷ್ಟೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿ ಜನರು ಬೆಳಕು ಕಾಣುವಂತಾಗಿದೆ. ಆಡಳಿತಾಧಿಕಾರಿಗಳು, ರಾಜಕೀಯ ನಾಯಕರ ಭ್ರಷ್ಟಾಚಾರ ಹೇಗೆ ಗ್ರಾಮಸ್ಥರನ್ನು ಇಷ್ಟು ವರ್ಷಗಳ ಕಾಲ ಕಗ್ಗತ್ತಲೆಯಲ್ಲಿ, ಕಷ್ಟದಲ್ಲಿ ಕಳೆಯುವಂತೆ ಮಾಡಿತ್ತು ಎನ್ನುವುದನ್ನು ಗ್ರಾಮಸ್ಥರು ಮರೆಯುವಂತಿಲ್ಲ.

ದುನ್ನಾಡಿ ಗ್ರಾಮ ಶೋಪಿಯಾನ್ ಜಿಲ್ಲೆಯ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು ಶ್ರೀನಗರದಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಇದು ಯರ್ವಾನ್ ಅರಣ್ಯ ಪ್ರದೇಶ ಮತ್ತು ಪೀರ್ ಪಂಜಲ್ ನ ಪಕ್ಕದಲ್ಲಿಯೇ ಇದೆ. ಈ ಕಣಿವೆ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಿಗೆ ಹೊಂದಿಕೊಂಡಿದೆ. ಇಲ್ಲಿ 30ರಿಂದ 40 ಕುಟುಂಬಗಳಿವೆ.

ಕೆಲ ವರ್ಷಗಳ ಹಿಂದೆ ಸೌಭಾಗ್ಯ ಯೋಜನೆಯಡಿ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಸಂಪರ್ಕ ಕಲ್ಪಿಸುವ ಕಾರ್ಯ ಆರಂಭಿಸಲಾಯಿತು. ಕೆಲಸ ಸಾಗುತ್ತಿರುವಾಗ ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ತಡೆಯೊಡ್ಡಿತು. ಅಲ್ಲಿಗೆ ಕೆಲಸ ಅರ್ಧಕ್ಕೆ ನಿಂತಿತು.

ಈ ವಿಷಯವನ್ನು ಜಮ್ಮು ಮತ್ತು ಕಾಶ್ಮೀರ ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತಂದೆನು. ಸೌಭಾಗ್ಯ ಯೋಜನೆಯಡಿ ವಿಶೇಷ ಅನುಮತಿ ನೀಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಕೇಳಿಕೊಂಡೆವು. ನಿಗಮ ನಮ್ಮ ಮನವಿಯನ್ನು ಸ್ವೀಕರಿಸಿ ವಿಶೇಷ ಅನುಮತಿ ನೀಡಿತು ಎಂದು ಪುಲ್ವಾಮ ಜಿಲ್ಲಾಧಿಕಾರಿ ಯಾಸಿನ್ ಚೌಧರಿ ಹೇಳುತ್ತಾರೆ.

ಸ್ಥಳೀಯರು ಮತ್ತು ಕ್ಷೇತ್ರಾಧಿಕಾರಿಗಳ ನೆರವಿನಿಂದ ಕೆಲಸಕ್ಕೆ ಚಾಲನೆ ನೀಡಲಾಯಿತು. ಒಂದೂವರೆ ಕಿಲೋ ಮೀಟರ್ ವರೆಗೆ ಪೋಲ್ ನೆಟ್ ವರ್ಕ್ ಮಾಡಿದೆವು. ಎರಡು ದಿನಗಳಲ್ಲಿ 35ರಿಂದ 40 ಪೋಲ್ ನಿರ್ಮಾಣ ಮಾಡಿದೆವು ಎನ್ನುತ್ತಾರೆ ಜಿಲ್ಲಾಧಿಕಾರಿ.ಕೆಲಸ ಬೇಗನೆ ನಿರಾತಂಕವಾಗಿ ಸಾಗಲು ಜಿಲ್ಲಾಧಿಕಾರಿ ಟೆಂಡರ್ ಕರೆಯುವ ಬದಲಿಗೆ ಬೇರೆ ಮೂಲಗಳ ಮೂಲಕ ಹಣ ಸಂಗ್ರಹಿಸಿದರು.

ಇದೀಗ 63 ಕೆವಿಎ ಟ್ರಾನ್ಸ್ ಫಾರ್ಮರ್ ಸ್ಥಾಪಿಸಿ ಏಳು ದಿನಗಳಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಇಷ್ಟು ದಿನ ಗ್ರಾಮಸ್ಥರು ಕ್ಯಾಂಡಲ್, ಟಾರ್ಚ್ ಲೈಟ್, ಸೀಮೆ ಎಣ್ಣೆ, ಸೌರ ವಿದ್ಯುತ್ ಗೆ ಅವಲಂಬಿತರಾಗಿದ್ದರು. ಇದೀಗ ವಿದ್ಯುತ್ ಸಂಪರ್ಕ ಬಂದಿದ್ದು ಗ್ರಾಮಸ್ಥರಿಗೆ ಖುಷಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com