ಚೆನ್ನೈ: ಮಹಾಮಾರಿ ಕೊರೋನಾ ವೈರಸ್ ನಿಂದ ಚೆನ್ನೈನಲ್ಲಿ 12 ವೈದ್ಯರು ಸೇರಿದಂತೆ ತಮಿಳುನಾಡಿನಲ್ಲಿ ಒಟ್ಟು 63 ವೈದ್ಯರು ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ ಎಂದು ದೆಹಲಿಯ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮಾಹಿತಿ ನೀಡಿದೆ.
ದೇಶದಲ್ಲಿ ಕೊರೋನಾದಿಂದ ಮೃತಪಟ್ಟ 382 ವೈದ್ಯರ ಪಟ್ಟಿಯನ್ನು ಐಎಂಎ ಪ್ರಕಟಿಸಿದ್ದು, ತಮಿಳುನಾಡಿನಲ್ಲಿ 63 ವೈದ್ಯರು ಮಹಾಮಾರಿಗೆ ಬಲಿಯಾಗಿದ್ದಾರೆ.
ಕೊರೋನಾದಿಂದ ಮೃತಪಟ್ಟ ಎಲ್ಲಾ ವೈದ್ಯರನ್ನು ಕೇಂದ್ರ ಸರ್ಕಾರ ಹುತಾತ್ಮರೆಂದು ಪರಿಗಣಿಸಬೇಕು ಮತ್ತು ಪರಿಗಣಿಸಲೇಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅವರ ಕುಟುಂಬ ಮತ್ತು ಮಕ್ಕಳು ಸರ್ಕಾರದ ಸಾಂತ್ವನ ಮತ್ತು ಪರಿಹಾರಕ್ಕೆ ಅರ್ಹರು ಎಂದು ವೈದ್ಯಕೀಯ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಪಂಚದ ಬೇರೆ ಎಲ್ಲಾ ದೇಶಗಳಿಗಿಂತ ಹೆಚ್ಚು ಆರೋಗ್ಯ ಕಾರ್ಯಕರ್ತರು ಭಾರತದಲ್ಲಿ ಮೃತಪಟ್ಟಿದ್ದಾರೆ. ಸಾಮಾನ್ಯ ಜನರಿಗಿಂತ ನಾಲ್ಕುಪಟ್ಟು ಹೆಚ್ಚು ಸಾವಿನ ಅಪಾಯ ವೈದ್ಯರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗಿದೆ, ಎಂದು ಐಎಂಎ ಹೇಳಿದೆ.
ಇನ್ನು ಕೋವಿಡ್ನಿಂದ ಮೃತಪಟ್ಟ ವೈದ್ಯರ ಕುರಿತ ಮಾಹಿತಿ ಸರ್ಕಾರದ ಬಳಿ ಲಭ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ವರ್ಧನ್ ಅವರು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯ ವಿರುದ್ದ ಐಎಂಎ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೋವಿಡ್ನಿಂದ ಮೃತಪಟ್ಟ 382 ವೈದ್ಯರ ಪಟ್ಟಿಯನ್ನು ಬಿಡುಗಡೆ ಮಾಡಿ, ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
Advertisement