ಚೆನ್ನೈ: ನೀಟ್ ಪರೀಕ್ಷೆ ನಡೆಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ನಿರ್ಧಾರ ಟೀಕಿಸಿದ್ದ ತಮಿಳು ನಟ ಸೂರ್ಯ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ಕೈಬಿಟ್ಟಿದೆ.
29 ಪುಟಗಳ ಆದೇಶದಲ್ಲಿ, ಅಡ್ವೋಕೇಟ್ ಜನರಲ್ ವಿಜಯ್ ನಾರಾಯಣ್ ಅವರ ಅಭಿಪ್ರಾಯಕ್ಕೆ ನ್ಯಾಯಪೀಠ ಒಪ್ಪಿಗೆ ನೀಡಿದ್ದು, ನಟನ ವಿರುದ್ಧ ಕ್ರಿಮಿನಲ್ ವಿಚಾರಣೆಯನ್ನು ಪ್ರಾರಂಭಿಸಲು ಒಪ್ಪಿಗೆ ನೀಡಲು ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಟ ಸೂರ್ಯ ನೀಡಿದ್ದ ಹೇಳಿಕೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಎಸ್.ಎಂ. ಸುಬ್ರಮಣಿಯಂ ಅವರು ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿಗೆ ಪತ್ರ ಬರೆದಿದ್ದರು.
ತಮಿಳು ನಾಡಿನಲ್ಲಿ ಮೂವರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡ ಕುಟುಂಬಗಳ ವಿದ್ಯಾರ್ಥಿಗಳ ಕನಸುಗಳನ್ನು ಕಿತ್ತು ಹಾಕುತ್ತಿರುವ ನೀಟ್ ಪರೀಕ್ಷೆಯನ್ನು ಶಾಶ್ವತವಾಗಿ ರದ್ದುಗೊಳಿಸಿ ಎಂದು ನಟ ಸೂರ್ಯ ಸರ್ಕಾರವನ್ನು ಒತ್ತಾಯಪಡಿಸಿದ್ದರು. ನೀಟ್ ಪರೀಕ್ಷೆಯನ್ನು ತೆಗೆದುಹಾಕುವ ಸಂಬಂಧ ಇದಕ್ಕೆ ಸಂಬಂಧಪಟ್ಟವರೆಲ್ಲರೂ ಧ್ವನಿಯೆತ್ತಬೇಕು ಎಂದು ನಟ ಒತ್ತಾಯಿಸಿದ್ದರು.
ಈ ಹೇಳಿಕೆ ವೇಳೆ ನಟ ಸೂರ್ಯ, ನ್ಯಾಯಾಲಯದ ಕಾರ್ಯವೈಖರಿ ಬಗ್ಗೆ ಕೂಡ ಮಾತನಾಡಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಭಯದಲ್ಲಿ ನ್ಯಾಯಾಲಯಗಳು ವರ್ಚುವಲ್ ವಿಚಾರಣೆ ಮೂಲಕ ನ್ಯಾಯ ವಿಲೇವಾರಿ ಮಾಡುತ್ತಿವೆ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಭಯವಿಲ್ಲದೆ ನೀಟ್ ಪರೀಕ್ಷೆಯನ್ನು ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರೆಯಿರಿ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
Advertisement