ನವದೆಹಲಿ: ಟಿಎಂಸಿ ನಾಯಕ ಡೆರೆಕ್ ಒಬ್ರಿಯೆನ್ ಮತ್ತು ಎಎಪಿಯ ಸಂಜಯ್ ಸಿಂಗ್ ಸೇರಿದಂತೆ ಎಂಟು ಸಂಸದರನ್ನು ಅಮಾನತುಗೊಳಿಸಿದ ಬಗ್ಗೆ ವಿರೋಧ ಪಕ್ಷಗಳು ಇಂದು ಕೋಲಾಹಲ ಎಬ್ಬಿಸಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ನಾಳೆಗೆ ಮುಂದೂಡಲಾಯಿತು.
ಕಲಾಪದ ವೇಳೆ ಇಂದು ಸಹ ವಿಪಕ್ಷಗಳು ಕೋಲಾಹಲ ಎಬ್ಬಿಸಿದ್ದರಿಂದ ಇಂದಿನ ಕಲಾಪವನ್ನು ಮುಂದೂಡಲಾಗಿದ್ದು ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳದೆ ಕಲಾಪ ವ್ಯರ್ಥವಾಯಿತು.
ಬೆಳಗ್ಗೆಯಿಂದ ನಾಲ್ಕು ಬಾರಿ ಕಲಾಪವನ್ನು ಮುಂದೂಡಿಕೆ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಮೇಲ್ಮನೆ ಪುನರಾರಂಭವಾದಾಗಲೂ ವಿಪಕ್ಷಗಳ ಸದಸ್ಯರು ಕಲಾಪದಲ್ಲಿ ಕೋಲಾಹಲ ಎಬ್ಬಿಸಿದವು. ಆಗ ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಸಂಸದರಾದ ಭುವನೇಶ್ವರ ಖಲಿತಾ ಅಮಾನತುಗೊಂಡಿರುವ ಸದಸ್ಯರನ್ನು ಸದನದಿಂದ ಹೊರ ನಡೆಯುವಂತೆ ಸೂಚಿಸಿದರು. ಸದನದಲ್ಲಿ ಕೋರಂ ಇರುವಂತೆ ನೋಡಿಕೊಳ್ಳಲು ಉಳಿದ ಸದಸ್ಯರಿಗೆ ತಿಳಿಸಿದರು. ಆದರೆ ಸದಸ್ಯರು ಹೊರ ನಡೆಯದಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.
ಕೃಷಿ ಮಸೂದೆ ಅಂಗೀಕಾರದ ವೇಳೆ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಮತ್ತು ಉಪ ಸಭಾಪತಿ ಅವರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪ ಮತ್ತು ಅಶಿಸ್ತಿನ ವರ್ತನೆ ಮೇರೆಗೆ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿತ್ತು.
ನಿನ್ನೆಯ ಕಲಾಪದ ವೇಳೆ ಸ್ಪೀಕರ್ ಸಮೀಪವೇ ಬಂದು ಡೆರೆಕ್ ಓಬ್ರಿಯೆನ್ ರೂಲ್ ಬುಕ್ ಹರಿದು ಹಾಕಿದ್ದರು. ಕೂಡಲೇ ಭದ್ರತಾ ಸಿಬ್ಬಂದಿಗಳು ಮಧ್ಯ ಪ್ರವೇಶಿಸಿ ಡೆರೆಕ್ ಅವರನ್ನು ತಡೆದಿದ್ದರು.
Advertisement