ತಿರುವನಂತಪುರ: 2008ರಲ್ಲಿ ನಡೆದಿದ್ದ ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿ ಮತ್ತು ಲಷ್ಕರ್ ಇ- ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕೆಯ ಆಧಾರದ ಮೇಲೆ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಕೇಂದ್ರಿಯ ತನಿಖಾ ತಂಡ ಸೋಮವಾರ ಬಂಧಿಸಿದೆ.
ಬಂಧಿತರನ್ನು ಉತ್ತರ ಪ್ರದೇಶದ ಗುಲ್ ನವಾಜ್ ಮತ್ತು ಕಣ್ಣೂರು ಬಳ್ಳಿಯ ಕೊಂಡತ್ ನಿವಾಸಿ ಶೋಯೆಬ್ ಆಲಿಯಾಸ್ ಪಾಜಿಲ್ ಎಂದು ಗುರುತಿಸಲಾಗಿದೆ.
ಗುಲ್ ನವಾಜ್ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹವಾಲಾ ಚಾನೆಲ್ಗಳ ಮೂಲಕ ಎಲ್ಇಟಿಗೆ ಹಣ ಸಂಗ್ರಹಿಸಿದ್ದಾರೆ ಎಂಬ ಆರೋಪವಿದ್ದರೆ, ಶೋಯೆಬ್ 2008 ರ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಎಲ್ಇಟಿ ಹವಾಲಾ ಹಣ ವಹಿವಾಟು ಪ್ರಕರಣದ ಉಸ್ತುವಾರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೊಂದಿದ್ದರೆ, ಬೆಂಗಳೂರು ಪೊಲೀಸರ ಭಯೋತ್ಪಾದನಾ ನಿಗ್ರಹ ಕೇಂದ್ರವು 2008 ರಲ್ಲಿ ನಗರದಲ್ಲಿ ನಡೆದಿದ್ದ ಸ್ಫೋಟಗಳ ಬಗ್ಗೆ ತನಿಖೆ ನಡೆಸುತ್ತಿದೆ.
ಇಬ್ಬರು ಭಯೋತ್ಪಾದಕ ಆರೋಪಿಗಳನ್ನು ಗಲ್ಫ್ನಿಂದ ಗಡೀಪಾರು ಮಾಡಲಾಗಿದ್ದು, ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಭಯೋತ್ಪಾದಕ ಶಂಕಿತ ಪ್ರಕರಣಗಳಿಗಾಗಿ ಕೇರಳದಿಂದ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶೋಯೆಬ್ ಭಾರತೀಯ ಮುಜಾಹಿದ್ದೀನ್ (ಐಎಂ) ಕಾರ್ಯಕರ್ತ ಮತ್ತು ಬೆಂಗಳೂರು ಸ್ಫೋಟದ ಆರೋಪಿ ಎಂದು ಹೇಳಲಾಗಿದೆ.
Advertisement