ಬೆಂಗಳೂರು: ಲೋಕಾಯುಕ್ತಕ್ಕೆ ದಾಖಲಾಗುವ ಪ್ರಕರಣಗಳ ಇತ್ಯರ್ಥಕ್ಕೆ ಸರ್ಕಾರ ಗಡವು ವಿಧಿಸಿದ್ದು, ನಿಗದಿತ ಅವಧಿಯಲ್ಲಿ ಇತ್ಯರ್ಥಗೊಳ್ಳದಿದ್ದರೆ ದೂರುದಾರರು ನೇರವಾಗಿ ಹೈಕೋರ್ಟ್ ಮೆಟ್ಟಿಲೇರಲು ಸರ್ಕಾರ ಅವಕಾಶ ಕಲ್ಪಿಸಿರುವುದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ) ವಿಧೇಯಕ- 2020' ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಇದುವರೆಗೆ ದೂರುಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಗೆ ನಿರ್ದಿಷ್ಟ ಸಮಯ ನಿಗದಿಪಡಿಸದ ಕಾರಣ ಎಷ್ಟೋ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಈಗ ಸಮಯ ನಿಗದಿಪಡಿಸಲಾಗಿದೆ ಎಂದರು.
ಇದನ್ನು ಸ್ವಾಗತಿಸಿದ ಸದಸ್ಯ ಮರಿತಿಬ್ಬೇಗೌಡ, ಲೋಕಾಯುಕ್ತ ಸಂಸ್ಥೆಯನ್ನೂ ಬಲಪಡಿಸುವ ನಿಟ್ಟಿನಲ್ಲಿ ಪೂರಕ ಕಾಯ್ದೆ ತರಬೇಕು. ಅಲ್ಲದೆ, ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕಡಿವಾಣ ಹಾಕುವ ಅಗತ್ಯವಿದೆ. ಬಿಜೆಪಿಯು ಚುನಾವಣಾ ಪೂರ್ವದಲ್ಲಿ ತಾನು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ನಿಷ್ಕ್ರೀಯಗೊಳಿಸಿ, ಲೋಕಾಯುಕ್ತಕ್ಕೆ ಪೂರ್ಣ ಪ್ರಮಾಣದ ಅಧಿಕಾರ ನೀಡುವುದಾಗಿ ಹೇಳಿತ್ತು. ಈಗ ಅಧಿಕಾರದಲ್ಲಿದ್ದರೂ ಯಾಕೆ ಮಾಡಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
Advertisement