ನವದೆಹಲಿ: ಚೀನಾ ಸೈನಿಕರು ನಿಯಮ ಉಲ್ಲಂಘಿಸಿ ಎಲ್ ಎಸಿ ದಾಟುವ ಭಂಡ ಧೈರ್ಯ ತೋರುವ ಸಾಹಸ ಮಾಡಿದರೆ ಗುಂಡು ಹಾರಿಸಲಾಗುತ್ತದೆ ಎಂದು ಭಾರತ ಚೀನಾಗೆ ಎಚ್ಚರಿಕೆ ನೀಡಿದೆ.
ಪೂರ್ವ ಲಡಾಖ್ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಅತಿಕ್ರಮಿಸಲು ಚೀನಾ ಸೇನೆ ಮುಂದಾದರೆ ಆತ್ಮರಕ್ಷಣೆ ಮತ್ತು ಗಡಿ ರಕ್ಷಣೆಗಾಗಿ ಗುಂಡು ಹಾರಿಸಲಾಗುತ್ತದೆ. ಚೀನಾ ಪೀಪಲ್ಸ್ ಲಿಬರೇಷನ್ ಸೇನೆಯು ಗಡಿಯಲ್ಲಿ ಶಾಂತಿ, ಸ್ಥಿರತೆಕಾಯ್ದುಕೊಳ್ಳುವ ಒಪ್ಪಂದವನ್ನು ಗೌರವಿಸುತ್ತಿಲ್ಲ. ಉದ್ವಿಗ್ನತೆ ಕಡಿಮೆ ಮಾಡಲು ಚೀನಾ ತನ್ನ ಸೇನೆಯನ್ನು ಗಡಿಯಿಂದ ಹಿಂಪಡೆಯಬೇಕು ಎಂಬ ಮಾತುಕತೆಯ ಕರಾರನ್ನೂ ಲೆಕ್ಕಿಸುತ್ತಿಲ್ಲ. ಹೀಗಾಗಿ ಚೀನಾ ಯೋಧರು ಎಲ್ಎಸಿ ದಾಟಿದರೆ ಗುಂಡು ಹಾರಿಸಲಾಗುವುದು ಎಂದು ಭಾರತ ಎಚ್ಚರಿಕೆ ನೀಡಿದೆ.
ಅಂತೆಯೇ ಇದು ಆತ್ಮರಕ್ಷಣೆಯೇ ಹೊರತು ಆಕ್ರಮಣವಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಈ ವಿಚಾರವನ್ನು ಕಳೆದ ವಾರ ನಡೆದ ಸೇನಾಧಿಕಾರಿಗಳ 6ನೇ ಸುತ್ತಿನ ಮಾತುಕತೆಯಲ್ಲೂ ಹೇಳಿತ್ತು. ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಸರ್ಕಾರ ಈ ತೀರ್ಮಾನಕ್ಕೆ ಬಂದಿತ್ತು. ಆದರೆ, ಜಾರಿ ಮಾಡಿರಲಿಲ್ಲ. ಇತ್ತೀಚೆಗೆ ಪ್ಯಾಂಗಾಂಗ್ ತೊ ಸರೋವರದಲ್ಲಿ ಚೀನಿ ಸೇನೆ ಮುಂದಾದಾಗ ಗುಂಡು ಹಾರಿಸಿ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿತ್ತು.
Advertisement