'ಹೊಸ ಕೃಷಿ ಮಸೂದೆಗೆ ಸಂಬಂಧಿಸಿದ ಬರೊಬ್ಬರಿ 15 ಸಾವಿರ ಸಲಹೆಗಳ ನಿರ್ಲಕ್ಷ್ಯ'!

ಹೊಸ ಕೃಷಿ ಮಸೂದೆಗೆ ಸಂಬಂಧಿಸಿದಂತೆ ದೇಶದ ಗ್ರಾಮೀಣ ಭಾಗಗಳಿಂದ ಬಂದಿದ್ದ 15,000 ಸಲಹೆಗಳನ್ನು ನಿರ್ಲಕ್ಷ್ಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
'ಹೊಸ ಕೃಷಿ ಮಸೂದೆಗೆ ಸಂಬಂಧಿಸಿದ ಬರೊಬ್ಬರಿ 15 ಸಾವಿರ ಸಲಹೆಗಳ ನಿರ್ಲಕ್ಷ್ಯ'!
'ಹೊಸ ಕೃಷಿ ಮಸೂದೆಗೆ ಸಂಬಂಧಿಸಿದ ಬರೊಬ್ಬರಿ 15 ಸಾವಿರ ಸಲಹೆಗಳ ನಿರ್ಲಕ್ಷ್ಯ'!

ನವದೆಹಲಿ: ಹೊಸ ಕೃಷಿ ಮಸೂದೆಗೆ ಸಂಬಂಧಿಸಿದಂತೆ ದೇಶದ ಗ್ರಾಮೀಣ ಭಾಗಗಳಿಂದ ಬಂದಿದ್ದ 15,000 ಸಲಹೆಗಳನ್ನು ನಿರ್ಲಕ್ಷ್ಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆರ್ ಎಸ್ಎಸ್ ನ ಅಂಗ ಸಂಸ್ಥೆ ಭಾರತೀಯ ಕಿಸಾನ್ ಸಂಘ್ (ಬಿಕೆಎಸ್) ಈ ನಿರ್ಲಕ್ಷ್ಯದ ಬಗ್ಗೆ  ಅಸಮಾಧಾನ  ವ್ಯಕ್ತಪಡಿಸಿದೆ. 

ಕೃಷಿ ಮಸೂದೆಯ ಕರಡನ್ನು ತಯಾರಿಸುವಾಗ ದೇಶಾದ್ಯಂತ 15,000 ಗ್ರಾಮಗಳಿಂದ ರೈತರನ್ನು ಸಂಪರ್ಕಿಸಿ ಮಸೂದೆ ಸಂಬಂಧ ಸಂಗ್ರಹಿಸಿದ್ದ ಸಲಹೆ, ಅಭಿಪ್ರಾಯ, ಅಂಶಗಳನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಕಳಿಸಿಕೊಡಲಾಗಿತ್ತು. ಅವರೂ ಸಹ ಅವುಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದರು. ಆದರೆ ಮಸೂದೆ ಅಂತಿಮ ಹಂತದಲ್ಲಿ ಅವುಗಳನ್ನು ಕೈಬಿಡಲಾಗಿದ್ದು ಎಲ್ಲವನ್ನೂ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಬಿಕೆಎಸ್ ಹೇಳಿದೆ. 

ಸಚಿವರ ಭರವಸೆಯ ಹೊರತಾಗಿಯೂ ಸಹ ಸಲಹೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ನಿರ್ಲಕ್ಷ್ಯ ಕೃಷಿ ಸಚಿವಾಲಯದಲ್ಲಿ ಅಧಿಕಾರಿಗಳ ಪ್ರಭಾವವನ್ನು ತೋರುತ್ತದೆ ಎಂದು ಬಿಕೆಎಸ್ ಹೇಳಿದೆ. 

ಇದೇ ವೇಳೆ ಸರ್ಕಾರ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸುವ ಹೊಸ ಕಾನೂನನ್ನು ಜಾರಿಗೆ ತರಬೇಕೆಂದು ಬಿಕೆಎಸ್ ನ ಪ್ರಧಾನ ಕಾರ್ಯದರ್ಶಿ ಬದ್ರಿನಾರಾಯಣ್ ಆಗ್ರಹಿಸಿದ್ದಾರೆ. 

ಮಸೂದೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನೆತ್ತಿರುವ ಬದ್ರಿನಾರಾಯಣ್ ಖಾಸಗಿ ಸಂಸ್ಥೆಗಳು ಶಿಮ್ಲಾದಲ್ಲಿ ಸೇಬು ಖರೀದಿಸುವ ಪ್ರಕ್ರಿಯೆಯಲ್ಲಿ ದೇಶದ ರೈತರನ್ನು ಮೂರ್ಖರನ್ನಾಗಿಸಿವೆ. ನಾಸಿಕ್ ನಲ್ಲಿ ರೈತರಿಗೆ ಮೋಸ ಮಾಡಿರುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಸರ್ಕಾರ ಮಂಡಿಗಳಿಗೆ ಪರ್ಯಾಯವನ್ನು ಕಲ್ಪಿಸುವುದಾದರೆ ರೈತರಿಗೆ  ನ್ಯಾಯಯುತ ಬೆಲೆ ಎಲ್ಲಿ ಸಿಗಲಿದೆ ಎಂಬುದಕ್ಕೆ ಖಾತ್ರಿ ಏನು ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಮನಸ್ಸು ಮಾಡಿದ್ದರೆ ಮಸೂದೆಗೆ ಸಂಬಂಧಿಸಿದಂತೆ ಈ ಗೊಂದಲ, ಅನಗತ್ಯ ಪ್ರತಿಭಟನೆಗಳನ್ನು ತಡೆಗಟ್ಟಬಹುದಿತ್ತು ಎಂದು ಬಿಕೆಎಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com