ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಳ: ಶಿರಡಿ ಸಾಯಿಬಾಬಾ, ಸಿದ್ದಿ ವಿನಾಯಕ ದೇಗುಲಗಳು ಬಂದ್
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಪ್ರಸಿದ್ಧ ಶಿರಡಿ ಸಾಯಿಬಾಬಾ ಹಾಗೂ ಸಿದ್ದಿ ವಿನಾಯಕ ದೇಗುಲಗಳನ್ನು ಬಂದ್ ಮಾಡಲಾಗಿದೆ.
Published: 06th April 2021 08:50 AM | Last Updated: 06th April 2021 08:50 AM | A+A A-

ಶಿರಡಿ ಸಾಯಿಬಾಬಾ, ಸಿದ್ದಿ ವಿನಾಯಕ ದೇಗುಲ
ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಪ್ರಸಿದ್ಧ ಶಿರಡಿ ಸಾಯಿಬಾಬಾ ಹಾಗೂ ಸಿದ್ದಿ ವಿನಾಯಕ ದೇಗುಲಗಳನ್ನು ಬಂದ್ ಮಾಡಲಾಗಿದೆ.
ಕೊರೊನಾ ಸೋಂಕು ಮತ್ತೆ ಹರಡುತ್ತಿದ್ದಂತೆ ದೇಶ ಮತ್ತೊಮ್ಮೆ ನಿರ್ಬಂಧಗಳ ವಲಯದೊಳಗೆ ಜಾರಿದೆ. ಭಾನುವಾರ ಒಂದೇ ದಿನ ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿರುವುದು ಜನರಲ್ಲಿ ಕಳವಳ ಸೃಷ್ಟಿಸಿದೆ. ಇದರಿಂದಾಗಿ ಆಯಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಎಚ್ಚೆತ್ತುಕೊಂಡಿದ್ದು. ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲು ನಿರ್ಧಾರ ತೆಗೆದುಕೊಂಡಿವೆ. ಜನ ದಟ್ಟಣೆ ನಿಯಂತ್ರಿಸಲು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೊವಿಡ್ ಉಗ್ರರೂಪದಿಂದಾಗಿ ರಾತ್ರಿ ಕರ್ಫ್ಯೂ ಜೊತೆಗೆ ವಾರಾಂತ್ಯದ ಲಾಕ್ಡೌನ್ ಘೋಷಿಸಿದೆ.
ಮಹಾರಾಷ್ಟ್ರದ ಕೊರೊನಾ ಬಿಕ್ಕಟ್ಟು ಗಮನದಲ್ಲಿಟ್ಟುಕೊಂಡು ಶಿರಡಿಯಲ್ಲಿರುವ ಸಾಯಿ ಬಾಬಾ ದೇಗುಲ ಮುಚ್ಚಲು ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ (ಎಸ್ಎಸ್ಟಿ) ನಿರ್ಧರಿಸಿದೆ. ಇಂದು ರಾತ್ರಿ 8 ರಿಂದ ಈ ತಿಂಗಳ 30 ರವರೆಗೆ ದೇಗುಲ ಮುಚ್ಚಲಾಗುವುದು ಎಂದು ಘೋಷಿಸಲಾಗಿದೆ. ಸಾಯಿಬಾಬಾ ದೇವಾಲಯದ ಜೊತೆಗೆ ಪ್ರಸಾದಾಲಯ ಮತ್ತು ಭಕ್ತ ನಿವಾಸ್ ಕೂಡ ಮುಚ್ಚಲಾಗುವುದು. ಈ ಸಮಯದಲ್ಲಿ ದೈನಂದಿನ ಪೂಜೆಗಳು ಮುಂದುವರಿಯಲಿವೆ. ದೇವಾಲಯವನ್ನು ಮುಚ್ಚಿದರೂ, ಎಸ್ಎಸ್ಟಿ ನಡೆಸುತ್ತಿರುವ ಕೋವಿಡ್ ಆಸ್ಪತ್ರೆ ಮತ್ತು ಇತರ ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.
ಸಿದ್ದಿ ವಿನಾಯಕ ದೇಗುಲ ಕೂಡ ಬಂದ್
ಶಿರಡಿ ಬೆನ್ನಲ್ಲೇ ಮುಂಬೈನ ಸಿದ್ಧಿ ವಿನಾಯಕ ದೇಗುಲವನ್ನು ಕೂಡ ಬಂದ್ ಮಾಡಲಾಗುವುದು ಎಂದು ದೇಗುಲ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಸರ್ಕಾರದ ಮುಂದಿನ ಆದೇಶದವರೆಗೂ ಸಿದ್ಧಿ ವಿನಾಯಕ ದೇಗುಲ ಬಂದ್ ಆಗಲಿದೆ ಎಂದು ಸ್ಪಷ್ಟಪಡಿಸಿದೆ.