ಪಶ್ಚಿಮ ಬಂಗಾಳದ ಸಿಟಾಲ್ಕುಚಿ, ಕೂಚ್ ಬೆಹರ್ ನಲ್ಲಿ ಪರಿಸ್ಥಿತಿ ಉದ್ವಿಗ್ನ: ಸಿಐಎಸ್ ಎಫ್ ಗುಂಡಿನ ದಾಳಿಗೆ ನಾಲ್ವರು ಬಲಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಸಿಟಲ್ಕುಚಿ ಮತಗಟ್ಟೆ ಬಳಿ ನಡೆದ ಗುಂಡಿನ ದಾಳಿಯಲ್ಲಿ ಯುವ ಮತದಾರ ಹತ್ಯೆಗೀಡಾದ ನಂತರ ಎದ್ದ ಗಲಭೆಯನ್ನು ನಿಯಂತ್ರಿಸಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ನಡೆಸಿದ ಗುಂಡಿನ ದಾಳಿಗೆ ಶನಿವಾರ ಮತ್ತೆ ನಾಲ್ವರು ಬಲಿಯಾಗಿದ್ದಾರೆ.
ಮತಗಂಬ ಬಳಿ ಭದ್ರತೆಗೆ ನಿಂತಿದ್ದ ಸಿಐಎಸ್ ಎಫ್ ಪಡೆಯಿಂದ ರೈಫಲ್ ಗಳನ್ನು ಕಸಿಯಲು ಸ್ಥಳೀಯರು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ರಕ್ಷಣೆಗೆ ಗುಂಡಿನ ಹಾರಿಸಲಾರಂಭಿಸಿದರು. ಅದಕ್ಕೆ ನಾಲ್ವರು ಹತ್ಯೆಗೀಡಾಗಿದ್ದಾರೆ. ಹತ್ಯೆಗೀಡಾದವರು ತಮ್ಮ ಬೆಂಬಲಿಗರು ಎಂದು ಟಿಎಂಸಿ ಹೇಳಿದೆ. ಇನ್ನು ಕಸ್ಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಂದ್ರಾಣಿ ಖಾನ್ ಅವರ ಮೇಲೆ ರಜ್ಡಂಗದಲ್ಲಿ ಹಲ್ಲೆ ನಡೆದಿದೆ.
ಇಂದು 5 ಜಿಲ್ಲೆಗಳ 44 ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಬೆಳಗ್ಗೆ 11.30ರವರೆಗೆ ಶೇಕಡಾ 33.98ರಷ್ಟು ಮತದಾನವಾಗಿದೆ.
ಮತಗಂಬ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ವಿಶೇಷ ಪೊಲೀಸ್ ವೀಕ್ಷಕರ ಬಳಿ ವರದಿ ಕೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ ಟಿಎಂಸಿಯ ಡೊಲಾ ಸೇನ್, ಕೇಂದ್ರ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತು. ಕೂಚ್ ಬೆಹಾರ್ ನ ಮತಬಂಗದ ಬ್ಲಾಕ್ 1ರಲ್ಲಿ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡರು. ಸಿಟಲ್ಕುಚಿ ಬ್ಲಾಕ್ ನಲ್ಲಿ ಮೂವರು ಹತ್ಯೆಯಾಗಿ ಒಬ್ಬರು ಗಾಯಗೊಂಡಿದ್ದಾರೆ. ಕೇಂದ್ರ ಭದ್ರತಾ ಪಡೆ ಜನರಿಗೆ ಅನ್ಯಾಯ ಮಾಡುತ್ತಿದೆ, ಮಿತಿಯನ್ನು ದಾಟಿ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅವರನ್ನು ಸ್ಥಳ ಬಿಟ್ಟು ಹೋಗಿ ಎಂದರೆ ಚುನಾವಣಾ ಆಯೋಗ ಮುಖ್ಯಮಂತ್ರಿಗಳಿಗೆ ನೊಟೀಸ್ ನೀಡಿದೆ ಎಂದು ಆರೋಪಿಸಿದರು.