ಮುಂಬೈ/ಜೈಪುರ್/ಭೋಪಾಲ್/ಬೆಂಗಳೂರು: ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಬೃಹತ್ ಮಟ್ಟದಲ್ಲಿ ವಿಸ್ತರಣೆಯಾಗುತ್ತಿರುವ ಸಂದರ್ಭದಲ್ಲಿ ತಮ್ಮ ರಾಜ್ಯದಲ್ಲಿ ಕೊರತೆಯುಂಟಾಗಿದೆ ಎಂದು ರಾಜಸ್ತಾನ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೋವಿಡ್ ಸೌಕರ್ಯ ಮತ್ತು ಲಸಿಕೆ ಕೊರತೆಯಿಂದ ಬಳಲುತ್ತಿರುವ ರಾಜ್ಯಗಳಾದ ರಾಜಸ್ತಾನ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಲಸಿಕೆ ಒದಗಿಸುವಂತೆ ಕೇಳಿಕೊಂಡಿದ್ದರು. ಕೊರೋನಾ ಸೋಂಕು ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಇನಾಕ್ಯುಲೇಷನ್ ಕೇಂದ್ರಗಳು ಮುಚ್ಚಿವೆ.
ರೆಮ್ಡೆಸಿವಿರ್ ಲಸಿಕೆಯ ಕೊರತೆಯಿದೆ ಎಂದು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಮಧ್ಯ ಪ್ರದೇಶಗಳಿಂದ ವರದಿಯಾಗಿವೆ.
ಪೂರೈಕೆಯನ್ನು ಹೆಚ್ಚಿಸಲು ನಾವು ಕೇಂದ್ರ ಸರ್ಕಾರವನ್ನು ಕೇಳುತ್ತಿದ್ದೇವೆ, ಆದರೆ ಇದುವರೆಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಕೋವಿಡ್ ಲಸಿಕೆ ಕೇಂದ್ರವನ್ನು ಸ್ಥಾಪಿಸಲು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ನಾವು ಸಾಕಷ್ಟು ಹಣವನ್ನು ಖರ್ಚು ಮಾಡುತ್ತೇವೆ, ಅನೇಕ ತರಬೇತಿ ಪಡೆದ ಜನರನ್ನು ತೊಡಗಿಸಿಕೊಳ್ಳುತ್ತೇವೆ.ಲಸಿಕಾ ಕೇಂದ್ರಗಳನ್ನು ಸ್ಥಗಿತಗೊಳಿಸುವುದು ನಮ್ಮ ಲಸಿಕೆ ಅಭಿಯಾನಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ರಾಜ್ಯ ಸರ್ಕಾರಗಳು ಹೇಳಿವೆ.
ಅನೇಕ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಳದಿಂದ ಆಸ್ಪತ್ರೆಗಳಲ್ಲಿ ಬೆಡ್ ಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಆಮ್ಲಜನಕ ಪೂರೈಕೆಗೆ ಬೇಡಿಕೆ ಹೆಚ್ಚುತ್ತಿದೆ. ಕೆಲವು ರಾಜ್ಯಗಳಲ್ಲಿ ಪೂರೈಕೆ ಕಡಿಮೆಯಾಗುತ್ತಿದೆ. ತಮ್ಮ ರಾಜ್ಯಕ್ಕೆ 1700ರಿಂದ 2500 ಎಂಟಿ ಆಮ್ಲಜನಕ ಏಪ್ರಿಲ್ ಕೊನೆಯ ಹೊತ್ತಿಗೆ ಅಗತ್ಯವಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಮಧ್ಯಪ್ರದೇಶದ ಸಾಗರ್, ಉಜ್ಜಯಿನಿ ಮತ್ತು ಖಾರ್ಗೋನ್ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ ರೋಗಿಗಳ ಸಾವಿನ ಬಗ್ಗೆ ವರದಿಗಳು ಬಂದಿವೆ, ಆದರೂ ರಾಜ್ಯ ಸರ್ಕಾರ ಅದನ್ನು ನಿರಾಕರಿಸಿತು. ರೆಮ್ಡೆಸಿವಿರ್ ಗೆ ಸಂಬಂಧಿಸಿದಂತೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಏಪ್ರಿಲ್ ಅಂತ್ಯದ ವೇಳೆಗೆ ತಮ್ಮ ರಾಜ್ಯದಲ್ಲಿ 90,000 ರಿಂದ 1 ಲಕ್ಷ ಬಾಟಲ್ ಆಮ್ಲಜನಕದ ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 50,000 ರಿಂದ 60,000 ಬಾಟಲ್ ಗಳು ಇವೆ.
ಕರ್ನಾಟಕದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾಗೆ ಔಷಧಿಗಳು ಸಿಗುತ್ತಿಲ್ಲ, ಕಪ್ಪು ಮಾರುಕಟ್ಟೆಯಲ್ಲಿ 4 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
Advertisement