ಆಂಧ್ರ ಪ್ರದೇಶ: 2 ಪ್ರತ್ಯೇಕ ಘಟನೆಗಳಲ್ಲಿ 10 ಮಂದಿ ಸಾವು, ಬೆಚ್ಚಿ ಬಿದ್ದ ವಿಶಾಖಪಟ್ಟಣ

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಒಂದೇ ದಿನ 10 ಮಂದಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಒಂದೇ ದಿನ 10 ಮಂದಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ 6 ಜನರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಜುತ್ತಾಡದಲ್ಲಿ ನಡೆದಿದೆ. ಘಟನೆಯಿಂದಾಗಿ ಇಡೀ ಊರಿನ ಜನ ಭಯಭೀತರಾಗಿದ್ದಾರೆ. ರಮಣ, ಉಷಾರಾಣಿ, ರಮಾದೇವಿ, ಅರುಣ, ಮಕ್ಕಳಾದ ಉದಯ, ಉರ್ವೀಷ  ಸೇರಿ ಆರು ಮಂದಿಯನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.

ಒಂದೇ ಕುಟುಂಬದ ಆರು ಸದಸ್ಯರನ್ನು ಕೊಲೆಗಡುಕರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಎಲ್ಲರೂ ನಿದ್ದೆ ಮಾಡುವಾಗ ಮಧ್ಯರಾತ್ರಿಯಲ್ಲಿ ಆಗಮಿಸಿದ ದುಷ್ಕರ್ಮಿಗಳು ಆರು ಜನರನ್ನು ಕ್ರೂರವಾಗಿ ಕೊಂದು ಹಾಕಿದ್ದಾರೆ. ಹಳೆಯ ದ್ವೇಷ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಅಪ್ಪಲರಾಜು ಎಂಬುವವರ  ವಿರುದ್ಧ ಕೊಲೆಗೈದಿರುವ ಆರೋಪ ಕೇಳಿ ಬಂದಿದ್ದು ಅಪ್ಪಲರಾಜುನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ‌ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಘಟನೆ ಸಂಬಂಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಮತ್ತೊಂದು ಘಟನೆಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಿಥಿಲಾಪುರಿ ಉಡಾ ಕಾಲೋನಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವದಹನವಾಗಿರುವ ಘಟನೆ ನಡೆದಿದೆ. ಬಂಗಾರುನಾಯ್ಡು(50), ಡಾ.ನಿರ್ಮಲಾ(44), ಮಕ್ಕಳಾದ ದೀಪಕ್(22), ಕಶ್ಯಪ್(19) ಮೃತ ದುರ್ದೈವಿಗಳು. ಮೃತರೆಲ್ಲ  ಎನ್.ಆರ್.ಐ ‌ಕುಟುಂಬದವರು ಎನ್ನಲಾಗಿದ್ದು‌, ಕಳೆದ 8 ತಿಂಗಳ ಹಿಂದೆ ವಿಶಾಖಪಟ್ಟಣಂ ಆದಿತ್ಯ ಟವರ್ಸ್​ನಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ‌ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಕುಟುಂಬ ಬೆಂಕಿಗಾಹುತಿಯಾಗಿದೆ. ಪ್ರಕರಣ ದಾಖಲಿಸಿಕೊಂಡು ವಿಶಾಖಪಟ್ಟಣಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಾರ್ಟ್ ಮೆಂಟ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸುತ್ತಿದ್ದಾರೆ. ಒಟ್ಟಾರೆ 2 ಘಟನೆಗಳಲ್ಲಿ 10 ಸಾವನ್ನಪ್ಪಿರುವ ಘಟನೆ ಇಡೀ ವಿಶಾಖಪಟ್ಟದ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com