ನವದೆಹಲಿ: ತಿಳಿಯದೇ ಅಜಾಗರೂಕತೆಯಿಂದ ಭಾರತೀಯ ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಪಾಕಿಸ್ತಾನ ಪ್ರಜೆಯನ್ನು ಗುರುವಾರ ಮಾನವೀಯ ನೆಲೆಯಲ್ಲಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಹಿಂದಿರುಗಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪೂಂಚ್-ರಾವಲಕೋಟೆ ಕ್ರಾಸಿಂಗ್ ಪಾಯಿಂಟ್ನಲ್ಲಿ ಭಾರತೀಯ ಸೇನೆಯು ಗುಲಾಮ್ ಖಾದಿರ್ ಎಂಬ ಪಾಕಿಸ್ತಾನ ಪ್ರಜೆಯನ್ನು ಪಿಒಕೆ ಸೇನಾಧಿಕಾರಿಗಳಿಗೆ ಹಸ್ತಾಂತರಿಸಿದೆ.
ಸೇನಾ ಮೂಲಗಳ ಪ್ರಕಾರ ಪಾಕ್ ಅಕ್ರಮಿತ ಕಾಶ್ಮೀರದ ನಿಕಿಯಾಲ್ ಪ್ರದೇಶದ ಘಿಮ್ ಗ್ರಾಮದ ನಿವಾಸಿಯಾಗಿದ್ದ ಖಾದೀರ್ ತಿಳಿಯದೇ ಎಲ್ ಒಸಿ ಗಡಿ ದಾಟಿ ಭಾರತೀಯ ಗಡಿ ಪ್ರವೇಶಿಸಿದ್ದ. ಗುರುವಾರ ಬೆಳಿಗ್ಗೆ 11:55 ರ ಸುಮಾರಿಗೆ ನಿಯಂತ್ರಣ ರೇಖೆಯ ಕ್ರಾಸಿಂಗ್ ಪಾಯಿಂಟ್ನಲ್ಲಿ ಇದನ್ನು ಗಮನಿಸಿದ್ದ ಭಾರತೀಯ ಸೇನಾಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಅಜಾಗರೂಕತೆಯಿಂದ ಗಡಿ ದಾಟಿದ್ದಾನೆ ಎಂದು ಮನಗಂಡ ಅಧಿಕಾರಿಗಳು ಆತನನ್ನು ಪಾಕಿಸ್ತಾನಕ್ಕೆ ಮರಳಿಸಲು ನಿರ್ಧರಿಸಿದ್ದರು.
ಇದೀಗ ಭಾರತಕ್ಕೆ ಪ್ರವೇಶಿಸಿದ ಖಾದಿರ್ ಅವರನ್ನು ಮಾನವೀಯ ನೆಲೆಯಲ್ಲಿ ವಾಪಸ್ ಕಳುಹಿಸಲಾಗಿದೆ.
Advertisement