ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ಸೋನಿಯಾ ಗಾಂಧಿ, ಒಂದು ವರ್ಷದ ತಯಾರಿಯ ಹೊರತಾಗಿಯೂ ನಮ್ಮ ಈಗಿನ ಪರಿಸ್ಥಿತಿಯು ಅತ್ಯಂತ ನಿರಾಶಾದಾಯಕವಾಗಿದೆ ಎಂದು ಕೇಂದ್ರ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿಯನ್ನು ಟೀಕಿಸಿದ್ದಾರೆ.
COVID-19 ಚಿಕಿತ್ಸೆಗಾಗಿ ಅಗತ್ಯವಿರುವ ಎಲ್ಲಾ ಉಪಕರಣಗಳು, ಔಷಧಿಗಳು ಮತ್ತು ಇತರೆ ಸಾಧನಗಳನ್ನು ಜಿಎಸ್ ಟಿಯಿಂದ ಮುಕ್ತಗೊಳಿಸಬೇಕು ಎಂದು ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಮುಖ್ಯಮಂತ್ರಿಗಳು ಆಕ್ಸಿಜನ್, ಆಸ್ಪತ್ರೆಯ ಬೆಡ್ ಹಾಗೂ ಲಸಿಕೆ ಕೊರತೆಯ ಬಗ್ಗೆ ಪದೇ ಪದೇ ಮನವಿ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದಿರುವ ಸೋನಿಯಾ ಗಾಂಧಿ, ಈ ಪ್ರಧಾನಿ ನರೇಂದ್ರ ಮೋದಿ ಅವರ ದಿವ್ಯ ಮೌನವನ್ನು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕೊರೋನಾ ಲಸಿಕೆ ನೀಡುವ ವಯಸ್ಸಿನ ಮಾನದಂಡವನ್ನು 25 ವರ್ಷದವರೆಗೂ ವಿಸ್ತರಿಸಬೇಕು ಎಂದು ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.
ಕರ್ಫ್ಯೂ, ಪ್ರಯಾಣ ನಿರ್ಬಂಧಗಳು, ಲಾಕ್ಡೌನ್ಗಳು ಮುಂತಾದ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರತಿ ಅರ್ಹ ಬಡ ಪ್ರಜೆಗೂ ಮಾಸಿಕ 6,000 ರೂಪಾಯಿ ನೆರವು ಒದಗಿಸಬೇಕು. ಮತ್ತೆ ತಮ್ಮ ರಾಜ್ಯಗಳತ್ತ ಮರಳುತ್ತಿರುವ ವಲಸೆ ಕಾರ್ಮಿಕರ ಸುರಕ್ಷತೆ ಹಾಗೂ ಆಸರೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸೋನಿಯಾ ಒತ್ತಾಯಿಸಿದ್ದಾರೆ.
Advertisement