ಡೆಹ್ರಾಡೂನ್: ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಸಂತರು ಓಗೊಟ್ಟಿದ್ದಾರೆ.
ಜುನಾ ಅಖಾಡದ ಮಹಾಮಂಡಲೇಶ್ವರರಾಗಿರುವ ಸ್ವಾಮಿ ಅವ್ದೇಶಾನಂದರೊಂದಿಗೆ ತಾವು ಪರಿಸ್ಥಿತಿಯ ಕುರಿತು ಚರ್ಚಿಸಿ ಸಾಂಕೇತಿಕ ಆಚರಣೆಗೆ ಕರೆ ನೀಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ತಿಳಿಸಿದ್ದರು.
ಇದರ ಬೆನ್ನಲ್ಲೇ 13 ಅಖಾಡಗಳ ಪೈಕಿ ಅತ್ಯಂತ ಪ್ರಭಾವಿ ಅಖಾಡವಾಗಿರುವ ಜುನಾ ಅಖಾಡದ ಮಹಾಮಂಡಲೇಶ್ವರರಾದ ಸ್ವಾಮಿ ಅವ್ಧೇಶಾನಂದರು ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ನಮ್ಮ ಸಂಪೂರ್ಣ ಬೆಂಬಲವಿದೆ, ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸುವುದಕ್ಕೆ ತಮ್ಮ ಸಂಪೂರ್ಣ ಬೆಂಬಲಿವಿದೆ ಎಂದು ತಿಳಿಸಿದ್ದಾರೆ. ಕುಂಭಮೇಳವನ್ನು ಸ್ಥಗಿತಗೊಳಿಸಬೇಕೆಂದು ಯಾರೂ ಹೇಳುತ್ತಿಲ್ಲ. ಆದರೆ ಭಾವಪರವಶರಾದ ಭಕ್ತಾದಿಗಳು ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹರಿದ್ವಾರದ ಕುಂಭಮೇಳಕ್ಕೆ ಆಗಮಿಸಬಾರದೆಂದು ಮನವಿ ಮಾಡುತ್ತಿದ್ದೇವೆ. ಈಗಾಗಲೇ ಭಕ್ತಾದಿಗಳ ಸಂಖ್ಯೆ ಹರಿದ್ವಾರದಲ್ಲಿ ಕಡಿಮೆಯಾಗಿದೆ ಎಂದು ಅವ್ಧೇಶಾನಂದರು ತಿಳಿಸಿದ್ದಾರೆ.
ಅಖಾಡಗಳು ಕೋವಿಡ್-19 ನಿಯಮಾವಳಿಗಳನ್ನು ಪಾಲಿಸುತ್ತಿವೆ ಎಂದು ಅವ್ಧೇಶಾನಂದರು ಹೇಳಿದ್ದಾರೆ. ಅಖಾಡಗಳಲ್ಲಿ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದೂ ಅವ್ಧೇಶಾನಂದರು ಮಾಹಿತಿ ನೀಡಿದ್ದಾರೆ.
Advertisement