ನವದೆಹಲಿ: ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಆರ್ ಟಿ- ಪಿಸಿಆರ್ ಟೆಸ್ಟ್ ವರದಿ ಪರಿಶೀಲನೆಯಲ್ಲಿ ವಿಫಲತೆ ಕಾರಣ ಇಂಡಿಗೋ ಸೇರಿದಂತೆ ಮತ್ತಿತರ ನಾಲ್ಕು ಏರ್ ಲೈನ್ಸ್ ಗಳ ವಿರುದ್ಧ ದೆಹಲಿ ಸರ್ಕಾರ ಭಾನುವಾರ ಪ್ರಕರಣ ದಾಖಲಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ 72 ಗಂಟೆ ಮುಂಚಿತದಲ್ಲಿನ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎಂದು ದೆಹಲಿ ಸರ್ಕಾರ ಕಳೆದ ವಾರ ಪ್ರಕಟಿಸಿತ್ತು. ನೆಗೆಟಿವ್ ವರದಿ ಇಲ್ಲದ ಪ್ರಯಾಣಿಕರು 14 ದಿನಗಳ ಕಾಲ ಕ್ವಾರಂಟೈನ್ ಇರಬೇಕಾಗುತ್ತದೆ ಎಂದು ಹೇಳಲಾಗಿತ್ತು.
ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 25 ಸಾವಿರ ಜನರಿಗೆ ಪಾಸಿಟಿವ್ ಬಂದಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ. ಶನಿವಾರ 24, 375 ಹೊಸ ಪ್ರಕರಣಗಳು ಪತ್ತೆಯಾಗಿದ್ದವು.
ಹಾಸಿಗೆ ಲಭ್ಯತೆ ಬಗ್ಗೆ ಅಧಿಕೃತ ಆ್ಯಪ್ ನಲ್ಲಿ ತಪ್ಪು ಮಾಹಿತಿ ನೀಡಿದ್ದ ಎರಡು ಖಾಸಗಿ ಆಸ್ಪತ್ರೆಗಳ ವಿರುದ್ಧವೂ ದೆಹಲಿ ಸರ್ಕಾರ ಎಫ್ ಐಆರ್ ದಾಖಲಿಸಿದೆ. ದೆಹಲಿ ಸರ್ಕಾರದ ಆ್ಯಪ್ನಲ್ಲಿ ಹಾಸಿಗೆಗಳ ಲಭ್ಯತೆಯನ್ನು ತೋರಿಸಿದರೂ ತಪ್ಪಾದ ಮಾಹಿತಿ ನೀಡುತ್ತಿದ್ದರೆ ಅಥವಾ ಕೊರೋನಾವೈರಸ್ ರೋಗಿಗಳನ್ನು ದೂರವಿಟ್ಟರೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಜ್ರಿವಾಲ್ ಶನಿವಾರ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದರು.
Advertisement