ಕೋವಿಡ್-19: ರೆಮ್ಡೆಸಿವಿರ್ ಔಷಧ, ಕಚ್ಚಾ ವಸ್ತು ಆಮದು ಸುಂಕ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ನೆರವಾಗುವ ರೆಮ್ಡೆಸಿವಿರ್ ಔಷಧಿ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ಭಾರತ ಸರ್ಕಾರ ರದ್ದುಗೊಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ನೆರವಾಗುವ ರೆಮ್ಡೆಸಿವಿರ್ ಔಷಧಿ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ಭಾರತ ಸರ್ಕಾರ ರದ್ದುಗೊಳಿಸಿದೆ. 

ರೆಮ್ಡೆಸಿವಿರ್ ಉತ್ಪಾದನೆಗೆ ಬಳಸುವ ಔಷಧೀಯ ಪದಾರ್ಥಗಳ ಮೇಲಿನ ಆಮದು ಸುಂಕವನ್ನೂ ರದ್ದುಪಡಿಸಲಾಗಿದೆ. ರೆಮ್ಡೆಸಿವಿರ್ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.ದೇಶದಲ್ಲಿ ರೆಮ್ಡೆಸಿವಿರ್ ಕೊರತೆ ಇದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಆದರೆ, ಭಾರತವು ರೆಮ್ಡೆಸಿವಿರ್ ಅನ್ನು ರಫ್ತು ಮಾಡುವುದೇ ಹೆಚ್ಚು. ಕೆಲ ದಿನಗಳ ಹಿಂದಿನವರೆಗೂ ಸುಮಾರು 100 ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ದೇಶದಲ್ಲಿ ಕೋವಿಡ್ ಪರಿಸ್ಥಿತಿ ಉಲ್ಬಣಿಸಿರುವುದರಿಂದ ಇತ್ತೀಚೆಗೆ ರಫ್ತು ನಿಷೇಧಿಸಲಾಗಿತ್ತು. ಈ ಮಧ್ಯೆ, ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ರೆಮ್ಡೆಸಿವಿರ್ ಔಷಧವನ್ನು ಹಂಚಿಕೆ ಮಾಡಲೂ ಕೇಂದ್ರ ನಿರ್ಧರಿಸಿದೆ.

‘ವೈದ್ಯಕೀಯ ಆಮ್ಲಜನಕ ಅಗತ್ಯವೂ ಇರುವಂಥ ಸಂದರ್ಭಗಳಲ್ಲಿ ರೆಮ್ಡೆಸಿವಿರ್ ಬಳಸಬೇಕೆಂದು ವೈದ್ಯಕೀಯ ಮಾರ್ಗದರ್ಶನ ಇದೆ. ಹೀಗಾಗಿ ವಿವಿಧ ರಾಜ್ಯಗಳಿಗೆ ಮಾಡಲಾದ ಆಮ್ಲಜನಕ ಹಂಚಿಕೆಯನ್ನು ಆಧರಿಸಿ ರೆಮ್ಡೆಸಿವಿರ್ ಪೂರೈಸಲಾಗುವುದು’ ಎಂದೂ ಹರ್ಷವರ್ಧನ್ ತಿಳಿಸಿದ್ದಾರೆ.

ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಔಷಧ ಕಾರ್ಯದರ್ಶಿ ಎಸ್.ಅಪರ್ಣಾ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಈ ಜೀವರಕ್ಷಕಗಳ ಬೆಲೆ ಭಾರೀ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ವಿದೇಶದಿಂದ ಆಮದಾಗುವ ವಸ್ತುಗಳಿಗೆ ಶೇ.10ರಷ್ಟು ಸುಂಕ ಇರುತ್ತದೆ. 

ದೇಶದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿದ್ದು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಪರಿಣಾಮವಾಗಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯುಂಟಾಗಿದೆ. ರೆಮ್ಡೆಸಿವಿರ್ ಸಹ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂದು ರಾಜ್ಯ ಸರ್ಕಾರಗಳು ದೂರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com