ನವದೆಹಲಿ: ಸಿಜೆಐ ಶರದ್ ಅರವಿಂದ್ ಬೋಬ್ಡೆ ಏ.23 ರಂದು ನಿವೃತ್ತರಾಗಿದ್ದು, ತಮ್ಮ ಸೇವಾ ಅವಧಿಯಲ್ಲಿ ತಾವು ಅತ್ಯುತ್ತಮವಾದದ್ದನ್ನೇ ಮಾಡಿದ್ದೇನೆ ಎಂಬ ತೃಪ್ತಿ, ಸಂತೋಷ, ಸದ್ಭಾವನೆ ಹಾಗೂ ಎಂದಿಗೂ ಉಳಿಯುವ ನೆನಪುಗಳೊಂದಿಗೆ ಸಿಜೆಐ ಸ್ಥಾನದಿಂದ ಹೊರ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಐತಿಹಾಸಿಕ ಅಯೋಧ್ಯೆ ತೀರ್ಪು ಸೇರಿದಂತೆ ಪ್ರಮುಖ ಪ್ರಕರಣಗಳಲ್ಲಿ ನ್ಯಾಯದಾನ ಮಾಡಿದ್ದ ಎನ್.ಎ ಬೋಬ್ಡೆ ನವೆಂಬರ್ 2019 ರಲ್ಲಿ ಭಾರತದ 47 ನೇ ಮುಖ್ಯನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು.
ಕೋವಿಡ್-19 ನಂತಹ ಹಿಂದೆಂದೂ ಕಾಣದ ಸವಾಲಿನ ಪರಿಸ್ಥಿತಿಯಲ್ಲಿ ಸಿಜೆಐ ಸ್ಥಾನದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ಎಸ್.ಎ ಬೋಬ್ಡೆ ಅವರ ಅವಧಿಯಲ್ಲಿ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯನಿರ್ವಹಿಸಿತ್ತು.
"ಸೇವಾ ಅವಧಿಯ ಕೊನೆಯ ದಿನ ನನ್ನಲ್ಲಿ ವರ್ಣಿಸಲು ಸಾಧ್ಯಾವಾಗದಂತಹ ಭಾವನೆಗಳು ಮೂಡಿವೆ. "ಸಂತೋಷ, ಅದ್ಭುತ ವಾದಗಳು, ಅತ್ಯುತ್ತಮ ಪ್ರಸ್ತುತಿಗಳು, ಅದ್ಭುತ ನೆನಪುಗಳೊಂದಿಗೆ ಸುಪ್ರೀಂ ಕೋರ್ಟ್ ನಿಂದ ನಿರ್ಗಮಿಸುತ್ತಿದ್ದೇನೆ" ಎಂದು ನಿರ್ಗಮಿತ ಸಿಜೆಐ ಬೋಬ್ಡೆ ಹೇಳಿದ್ದಾರೆ.
"ನ್ಯಾಯಾಧೀಶರಾಗಿ 21 ವರ್ಷಗಳ ಸೇವಾ ಅವಧಿಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿನ ಅನುಭವ ಶ್ರೀಮಂತವಾಗಿದೆ, ಸಹೋದ್ಯೋಗಿ ನ್ಯಾಯಾಧೀಶರೊಂದಿಗಿನ ನಿಕಟ ಸ್ನೇಹ ಅದ್ಭುತವಾಗಿತ್ತು" ಎಂದು ನೆನಪುಗಳನ್ನು ಎಸ್ಎ ಬೋಬ್ಡೆ ಮೆಲುಕು ಹಾಕಿದ್ದಾರೆ.
ಇದೇ ವೇಳೆ ವರ್ಚ್ಯುಯಲ್ ಹಿಯರಿಂಗ್ ಗಳ ವೇಳೆ ಉಂಟಾದ ಅತೃಪ್ತಿಕರ ವಿಷಯಗಳನ್ನೂ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. "ಜವಾಬ್ದಾರಿಯನ್ನು ಎನ್ ಬಿ ರಮಣ ಅವರಿಗೆ ವರ್ಗಾಯಿಸುತ್ತಿದ್ದು, (48 ನೇ ಸಿಜೆಐ) ಅವರು ಕೋರ್ಟ್ ನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಲಿದ್ದಾರೆ" ಎಂದು ಬೋಬ್ಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement