ನವದೆಹಲಿ: ಕೊರೋನಾ ಸೋಂಕು ಪೀಡಿತ ತಾಯಿಗೆ ಆಕ್ಸಿಜನ್ ಒದಗಿಸುವಂತೆ ಬೇಡಿಕೊಂಡ ವ್ಯಕ್ತಿಯೊಬ್ಬರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಕಪಾಳಮೋಕ್ಷ ಹೊಡೆಯುತ್ತೇನೆಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಕುರಿತು ಕಾಂಗ್ರೆಸ್ ಕೇಂದ್ರ ಸಚಿವರ ವಿರುದ್ಧ ಹರಿಹಾಯುತ್ತಿದ್ದು, ಕೇಂದ್ರ ಸಚಿವರ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಎರಡು ದಿನಗಳ ಹಿಂದೆ ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಲೂಟಿ ಮಾಡಲಾಗಿತ್ತು. ಘಟನೆ ನಡೆದ ಎರಡು ದಿನಗಳ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ವೇಳೆ ವ್ಯಕ್ತಿಯೊಬ್ಬರು ಸಚಿವರ ಬಳಿ ಬಂದು ನನ್ನ ತಾಯಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಆಕ್ಸಿಜನ್ ಸಿಲಿಂಡರ್ ಅಗತ್ಯವಿದೆ. 36 ಗಂಟೆಗಳ ಬಳಿಕ ಆಕ್ಸಿಜನ್ ನೀಡುವುದಾಗಿ ಆಸ್ಪತ್ರೆಯವರು ಹೇಳಿದ್ದರು. ಆದರೆ, ಇನ್ನೂ ಕೊಟ್ಟಿಲ್ಲ ಎಂದು ಹೇಳಿದರು. ಮಾತನಾಡುವ ವೇಳೆ ವ್ಯಕ್ತಿ ಸಚಿವರ ಮೇಲೆ ಬೆರಳು ತೋರಿಸಿ ಮಾತನಾಡಿದ್ದರು.
ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಸಚಿವರು ಕೈಕೆಳಗಿಳಿಸುವಂತೆ ಸೂಚಿಸಿದರು. ಅಲ್ಲದೆ, ಇದೇ ದಾಟಿಯಲ್ಲಿ ಮಾತನಾಡಿದರೆ, ಕಪಾಳಕ್ಕೆ ಹೊಡೆಯುತ್ತೇನೆಂದು ಹೇಳಿದರು.
ನಂತರ ಅಳಲಾರಂಭಿಸಿದ ವ್ಯಕ್ತಿ, ಹೌದು, ನನಗೆ ಅದುವೇ ಸಿಗುತ್ತದೆ ಎಂಬುದು ಗೊತ್ತಿದೆ. ನನ್ನ ತಾಯಿ ಅಲ್ಲಿಯೇ ಮಲಗಿದ್ದಾಳೆ. ಈಗ ನಾವೇನೂ ಮಾಡಬೇಕು ಎಂದು ಕೇಳಿದ್ದಾನೆ. ಬಳಿಕ ವಿಡಿಯೋ ರೆಕಾರ್ಡ್ ಆಗುತ್ತಿರುವುದನ್ನು ಗಮನಿಸಿದ ಸಚಿವರು ಕೂಡಲೇ ಎಚ್ಚೆತ್ತುಕೊಂಡು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.
ನಿಮಗೆ ಯಾರಾದರೂ ಆಮ್ಲಜನಕ ಸಿಲಿಂಡರ್ ನಿರಾಕರಿಸಿದ್ದಾರೆಯೇ? ಎಂದು ಕೇಳಿದ್ದಾರೆ. ಆಗ ಆ ವ್ಯಕ್ತಿ, "ಹೌದು, ಅವರು ನಿರಾಕರಿಸಿದರು, ನಮಗೆ ಐದು ನಿಮಿಷ ಮಾತ್ರ ಆಕ್ಸಿಜನ್ ಸಿಕ್ಕಿತು" ಎಂದು ಉತ್ತರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಘಟನೆ ಕುರಿತು ಕಾಂಗ್ರೆಸ್ ಮುಖ್ಯ ವಕ್ತಾರ ಕೆಕೆ.ಮಿಶ್ರಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಉಪಚುನಾವಣೆಗೂ ಮುನ್ನ ದಾಮೋಹ್ ನಲ್ಲಿ ಸೋಂಕಿಗೊಳಗಾಗುವ ಪ್ರತೀಯೊಬ್ಬ ವ್ಯಕ್ತಿಯನ್ನೂ ಸಚಿವರ ಕಾರಿನಲ್ಲಿ ಭೋಪಾಲ್ ಅಥವಾ ಜಬಲ್ಪುರ ಆಸ್ಪತ್ರೆಗಳಿಗೆ ದಾಖಲು ಮಾಡಲಾಗುತ್ತಿತ್ತು. ಇದೀಗ ಕೆಲಸ ಮುಗಿದ ಮೇಲೆ ಬಿಜೆಪಿ ಕಾರ್ಯಕರ್ತ ತನ್ನ ತಾಯಿಯ ಜೀವ ಉಳಿಸಲು ಆಕ್ಸಿಜನ್ ಕೇಳಿದರೆ ಕಪಾಳಕ್ಕೆ ಹೊಡೆಯುತ್ತೇನೆಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement