ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಾಮಾರಿ ಕೊರೋನಾ ಆಬ್ಬರ ಹೆಚ್ಚಾಗುತ್ತಲೇ ಇದ್ದು, ಆಮ್ಲಜನಕದ ಕೊರತೆ ಎದುರಾಗಿರುವ ಬೆನ್ನಲ್ಲೇ ಮೇ 3ರ ವರೆಗೂ ಲಾಕ್ಡೌನ್ ವಿಸ್ತರಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೆಹಲಿಯಲ್ಲಿ ಆರು ದಿನಗಳ ಲಾಕ್ಡೌನ್ ಜಾರಿ ಮಾಡಲಾಗಿದ್ದು. ಮುಂದಿನ ಸೋಮವಾರ (ಮೇ 3) ಬೆಳಿಗ್ಗೆ 5 ಗಂಟೆಯ ವರೆಗೂ ಈ ಲಾಕ್ಡೌನ್'ನ್ನು ವಿಸ್ತರಿಸಲಾಗಿದೆ' ಎಂದು ಹೇಳಿದ್ದಾರೆ.
ಒಂದು ವಾರದಿಂದ ಲಾಕ್ಡೌನ್ ಘೋಷಿಸಿ, ಜನರ ಗುಂಪುಗೂಡುವಿಕೆಯನ್ನು ನಿಯಂತ್ರಿಸಿದ್ದರೂ ದೆಹಲಿಯಲ್ಲಿ ಕೊರೋನಾ ಕಂಟಕ ಮುಂದುವರಿದಿದೆ. ಶನಿವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೆಹಲಿಯ ವಿವಿಧೆಡೆ ಹೊಸದಾಗಿ 24,103 ಜನಕ್ಕೆ ಕೊರೊನಾ ಸೋಂಕು ತಗುಲಿದೆ.
'ಆಮ್ಲಜನಕ ಪೂರೈಕೆಗೆ ಅನುವಾಗುವ ನಿಟ್ಟಿನಲ್ಲಿ ಪೋರ್ಟಲ್ ಆರಂಭಿಸಲಾಗಿದ್ದು, ಪ್ರತಿ 2 ಗಂಟೆಗಳಿಗೊಮ್ಮೆ ಅಪ್ಡೇಟ್ ಆಗಲಿದೆ. ಆಮ್ಲಜನಕ ಉತ್ಪಾದಕರು, ವಿತರಕರು ಹಾಗೂ ಆಸ್ಪತ್ರೆಗಳಿಂದ ಪ್ರಸ್ತುತ ಆಮ್ಲಜನಕ ಪೂರೈಕೆ ಮತ್ತು ಸಂಗ್ರಹದ ಮಾಹಿತಿ ಅಪ್ಡೇಟ್ ಆಗಲಿದೆ. ಕೇಂದ್ರ ಮತ್ತು ರಾಜ್ಯಗಳ ತಂಡಗಳು ಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ' ಎಂದು ತಿಳಿಸಿದ್ದಾರೆ.
Advertisement