'ಕೋವಿಡ್ ನ್ಯುಮೋನಿಯಾ'; ಕೊರೋನಾ ವೈರಸ್ 2ನೇ ಅಲೆ ಮಕ್ಕಳಿಗೂ ಅತ್ಯಂತ ಅಪಾಯ: ವೈದ್ಯರ ಎಚ್ಚರಿಕೆ

ಭಾರತ ದೇಶಾದ್ಯಂತ ಮಾರಣಾಂತಿಕವಾಗಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು 2ನೇ ಅಲೆ ಹಿರಿಯರು, ವಯಸ್ಕರು ಮಾತ್ರವಲ್ಲದೇ ಮಕ್ಕಳಿಗೂ ಅತ್ಯಂತ ಅಪಾಯ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಭಾರತ ದೇಶಾದ್ಯಂತ ಮಾರಣಾಂತಿಕವಾಗಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು 2ನೇ ಅಲೆ ಹಿರಿಯರು, ವಯಸ್ಕರು ಮಾತ್ರವಲ್ಲದೇ ಮಕ್ಕಳಿಗೂ ಅತ್ಯಂತ ಅಪಾಯ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸೋಂಕಿಗೆ ತುತ್ತಾದ ಸಾಕಷ್ಟು ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ಗಮನಿಸಿದ್ದಾರೆ. ಇಂತಹ ಲಕ್ಷಣಗಳನ್ನು ಈ ಹಿಂದೆ ಅಂದರೆ ಮೊದಲ ಅಲೆಯಲ್ಲಿ ನೋಡಿರಲಿಲ್ಲ. ಆದರೆ 2ನೇ ಅಲೆ ವೇಳೆ ಇಂತಹ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಇದು ಅತ್ಯಂತ ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮಕ್ಕಳನ್ನು ಕಾಡುತ್ತಿದೆ ಕೋವಿಡ್ ನ್ಯುಮೋನಿಯಾ
ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶದ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಸಾಕಷ್ಚು ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಎರಡು ವರ್ಷದ ಮಕ್ಕಳನ್ನೂ ಸಹ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗಳಿಗೆ ಕರೆತರಲಾಗುತ್ತಿದೆ, ಏಪ್ರಿಲ್ 23 ರಂದು, ಚೆನ್ನೈನ ಎಗ್ಮೋರ್ ನ ಸರ್ಕಾರಿ ಮಕ್ಕಳ  ಆರೋಗ್ಯ ಆಸ್ಪತ್ರೆಯಲ್ಲಿ ಕೋವಿಡ್ ನ್ಯುಮೋನಿಯಾದಿಂದ 19 ದಿನಗಳ ಹೆಣ್ಣುಮಗು ಮೃತಪಟ್ಟಿತ್ತು. ಮಕ್ಕಳಿಗೆ ಸಂಬಂಧಿಸಿದಂತೆ ಇದು ಬಹುಶಃ ಮೊದಲ ಕೋವಿಡ್-19 ಸಾವಾಗಿರಬಹುದು.

ಆರಂಭದಲ್ಲಿ ಮಗುವನ್ನು ಬೇರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಇಲ್ಲಿಗೆ ಕರೆತರಲಾಗಿತ್ತು. ಮಗುವಿನ ಪೋಷಕರು ಕೋವಿಡ್‌ನ ಲಕ್ಷಣಗಳನ್ನು ಹೊಂದಿದ್ದರು. ಆದರೆ ಅವರಿಗೆ ಈ ಸೋಂಕಿದೆ ಎಂದು ತಿಳಿದಿರಲಿಲ್ಲ. ಕೋವಿಡ್ ನ್ಯುಮೋನಿಯಾದಿಂದ ಮಗು ಸತ್ತುಹೋಯಿತು. ಕೋವಿಡ್ ನ್ಯುಮೋನಿಯಾಕ್ಕೆ ತುತ್ತಾಗುವ ಮಕ್ಕಳಲ್ಲಿ ಇದು ಬಹುಶಃ ತಮಿಳುನಾಡಿನ ಮೊದಲ ಸಾವು ಪ್ರಕರಣವಾಗಿದೆ. ಕಳೆದ ವರ್ಷ ನಾವು ಇಂತಹ ಶ್ವಾಸಕೋಶದ ಸೋಂಕನ್ನು ನೋಡಿರಲಿಲ್ಲ. ಇದು ನಮ್ಮ ಮೊದಲ ಪ್ರಕರಣವೂ ಹೌದು ಎಂದು ಸಂಸ್ಥೆಯ ನಿರ್ದೇಶಕ ಡಾ.ಎಸ್.ಎಳಿಲರಸಿ ಹೇಳಿದ್ದಾರೆ.

ಚೆನ್ನೈನಸ ಇತರೆ ಮಕ್ಕಳ ವೈದ್ಯರೂ ಸಹ ಕಳೆದ ವರ್ಷ ಶ್ವಾಸಕೋಶದ ತೊಂದರೆ ಇರುವ ಯಾವುದೇ ಮಕ್ಕಳನ್ನು ನೋಡಿರಲಿಲ್ಲ. ಇದೇ ವಿಚಾರವಾಗಿ ಮಾತನಾಡಿರುವ ಶಿಶು ವೈದ್ಯರೊಬ್ಬರು, '11 ವರ್ಷದ ಬಾಲಕನೋರ್ವ ಮಧ್ಯಮ ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ಬಂದಿದ್ದನು. ಅವನಿಗೆ ಕನಿಷ್ಠ ಆಮ್ಲಜನಕದ ನೆರವಿನ ಅಗತ್ಯವಿತ್ತು. ಚಿಕಿತ್ಸೆ ನೀಡಿದಾಗ ಮರುದಿನ ಚೇತರಿಸಿಕೊಂಡ. ನಮ್ಮ ಆಸ್ಪತ್ರೆಯಲ್ಲಿ ಕಿರಿಯ ರೋಗಿ ಅಂದರೆ ಅದು ಎರಡು ವರ್ಷದ ಮಗು. ಆ ಮಗುವಿಗೆ ಕೊಂಚ ಶ್ವಾಸಕೋಶದ ಸೋಂಕು ಕೂಡ ಇತ್ತು. ಆದರೆ ಆಮ್ಲಜನಕದ ಬೆಂಬಲ ಅಗತ್ಯವಿರಲಿಲ್ಲ. ಆಮ್ಲಜನಕದ ಅವಶ್ಯಕತೆ ಇರುವ ಇಬ್ಬರು ಮಕ್ಕಳನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಈ ಹಿಂದೆ ಆಸ್ಪತ್ರೆಗೆ ದಾಖಲಾಗುತ್ತಿದ್ದ ಮಕ್ಕಳಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರಲಿಲ್ಲ. ಆದರೆ ಇದೀಗ ದಾಖಲಾಗುವ ಬಹುತೇಕ ಮಕ್ಕಳಿಗೆ ಆಮ್ಲಜನಕದ ಅಗತ್ಯವಿರುತ್ತದೆ, ಇಂತಹ ಪರಿಸ್ಥಿತಿ ನಮಗೆ ಹೊಸದು ಎಂದು ಹೇಳಿದ್ದಾರೆ. 

ಏತನ್ಮಧ್ಯೆ, ಚೇಟ್ ಪೇಟ್ ನ ಡಾ. ಮೆಹ್ತಾ ಆಸ್ಪತ್ರೆಯ ಹಿರಿಯ ಸಲಹೆಗಾರ ಮತ್ತು ವೈದ್ಯ ನಿರ್ದೇಶಕ ಡಾ. ಎನ್ ಕಣ್ಣನ್ ಅವರು ಇದೇ ವಿಚಾರವಾಗಿ ಮಾತನಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಹೆಚ್ಚಿನ ಮಕ್ಕಳು ಸೋಂಕು ಬಾಧಿತರಾಗಿದ್ದಾರೆ. ಆದರೆ ಇದು ಇನ್ನೂ ಹೆಚ್ಚಾಗಿ ವಯಸ್ಕರಲ್ಲಿ ಪರಿಣಾಮ ಬೀರುತ್ತಿದೆ. ಕೋವಿಡ್‌ನ ಮೊದಲ ತರಂಗದಲ್ಲಿ, ಮಕ್ಕಳು ಲಕ್ಷಣರಹಿತರಾಗಿದ್ದರು, ಆದರೆ ಈಗ ಅವರು ಜ್ವರ, ಅತಿಸಾರ, ಶೀತ ಮತ್ತು ಕೆಮ್ಮಿನಂತಹ ಲಕ್ಷಣಗಳನ್ನು ಹೊಂದಿದ್ದಾರೆ. ಮನೆಯಲ್ಲಿ ವಯಸ್ಕರಿಗೆ ತೀವ್ರವಾದ ರೋಗಲಕ್ಷಣಗಳು ಇರುವುದರಿಂದ, ಮಕ್ಕಳು ಸಹ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com