ಕೋವಿಡ್-19 ತುರ್ತು ಸೇವೆಗಳಿಗೆ ದೇಶಾದ್ಯಂತ #BJYMDoctorHelpline ಸಹಾಯವಾಣಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಚಾಲನೆ

ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ ಸಹಾಯವಾಗುವ ನಿಟ್ಟಿನಲ್ಲಿ ಇಡೀ ದೇಶಾದ್ಯಂತ ಸಹಾಯವಾಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಏ.28 ರಂದು ಚಾಲನೆ ನೀಡಿದರು.
ಜೆಪಿ ನಡ್ಡಾ
ಜೆಪಿ ನಡ್ಡಾ

ನವದೆಹಲಿ: ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ ಸಹಾಯವಾಗುವ ನಿಟ್ಟಿನಲ್ಲಿ ಇಡೀ ದೇಶಾದ್ಯಂತ #BJYMDoctorHelpline ಸಹಾಯವಾಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಏ.28 ರಂದು ಚಾಲನೆ ನೀಡಿದರು. 080 6817 3286 ಸಹಾಯವಾಣಿಯ ಸಂಖ್ಯೆಯಾಗಿದೆ. 

"ಕೊರೋನ ಸೋಂಕಿನ ಲಕ್ಷಣಗಳಿದ್ದಲ್ಲಿ ಅಥವಾ ಲಕ್ಷಣಗಳು ಇಲ್ಲದ್ದಿದಲ್ಲಿ, ನಿಮ್ಮ ಕೋವಿಡ್ ರಿಪೋರ್ಟ್ ಪಾಸಿಟಿವ್ ಆಗಿದ್ದಲ್ಲಿ ನಿಮಗೆ ಸರಿಯಾದ ಮಾಹಿತಿ, ನೀವು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಲು ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ಟೆಲಿ ಕನ್ಸಲ್ಟೇಶನ್ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ 500ಕ್ಕೂ ಅಧಿಕ ವೈದ್ಯರು ದೇಶಾದ್ಯಂತ ಟೆಲಿ ಸಮಾಲೋಚನೆ ಮೂಲಕ  ರೋಗಿಗಳ ಸಹಾಯಕ್ಕೆ ಸಹಕರಿಸಲಿದ್ದಾರೆ.

ಸಹಾಯವಾಣಿ 080 6817 3286 ಸಂಖ್ಯೆಗೆ ಕರೆ ಮಾಡಿ ತಮಗೆ ಬೇಕಾದ ಭಾಷೆಯನ್ನು ಆಯ್ದುಕೊಂಡ ನಂತರ ಕೆಲವೇ ನಿಮಿಷಗಳಲ್ಲಿ, ತಜ್ಞ ವೈದ್ಯರು, ಸೋಂಕಿತರ  ಮೊಬೈಲ್ ಗೆ ಕರೆ ಮಾಡಿ ಕೋವಿಡ್ ನ ಲಕ್ಷಣಗಳು, ಆಮ್ಲಜನಕದ ಸ್ಯಾಚುರೇಶನ್ ಪ್ರಮಾಣ ಮತ್ತು ಇತರ ಅಗತ್ಯ ವಿವರಗಳನ್ನು ಪಡೆದು  ಸೂಕ್ತವಾದ ಸಲಹೆ ನೀಡಲಿದ್ದಾರೆ. ಹೋಂ ಐಸೋಲೇಷನ್  ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು & ತೆಗೆದುಕೊಳ್ಳಬೇಕಾದ ಔಷಧೋಪಚಾರದ ಬಗ್ಗೆ ವಿವರವಾದ ಮಾಹಿತಿಯನ್ನು ಕೂಡ ನೀಡಲಿದ್ದಾರೆ. ಒಂದು ವೇಳೆ ಆಸ್ಪತ್ರೆಯ ವೈದ್ಯೋಪಚಾರದ ಅವಶ್ಯಕತೆ ಇದ್ದಲ್ಲಿ ಅದಕ್ಕೆ ಬೇಕಾದ ಮಾಹಿತಿ ಕೂಡ ತಮಗೆ ಲಭ್ಯವಿರಲಿದೆ. ಇದಲ್ಲದೇ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ವೈದ್ಯರು ಶಿಫಾರಸು ಮಾಡಿದ  ಔಷಧಗಳನ್ನು ತಮ್ಮಮನೆ ಬಾಗಿಲಿಗೇ ನೇರವಾಗಿ ಬಂದು ತಲುಪಿಸಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಹಾಗೂ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ  ಸಹಾಯವಾಣಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದೇಶಾದ್ಯಂತ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯವಾಣಿ ಗೆ  ಇತರ ಸ್ಟಾರ್ಟ್ ಅಪ್ ಗಳು, ಯುವ ಉದ್ಯಮಿಗಳೊಂದಿಗೆ ಚಾಲನೆ ನೀಡಿರುವ ಬಿಜೆಪಿ ಯುವ ಮೋರ್ಚಾದ ಕಾರ್ಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಶ್ಲಾಘಿಸಿದ್ದು, "ದೇಶದ ಯಾವುದೇ ಮೂಲೆಯಿಂದ ನಾಗರಿಕರು ಕರೆ ಮಾಡಿದ ನಂತರ ಐ.ವಿ.ಆರ್ ಮೂಲಕ ತಮ್ಮ ಆದ್ಯತೆಗಳನ್ನು ನಮೂದಿಸಿದ ತಕ್ಷಣ, ವೈದ್ಯರೊಬ್ಬರಿಂದ ಕರೆ ಮಾಡಲಾಗುತ್ತದೆ. ನಂತರ ಕರೆ ಮಾಡಿದ ವ್ಯಕ್ತಿಯು ಆಯಾ ರಾಜ್ಯದ ನಿರ್ಧಿಷ್ಟ ಯುವ ಮೋರ್ಚಾ ಘಟಕ/ ಕಾರ್ಯಕರ್ತರ ಮೂಲಕ ಔಷಧಿಗಳು, ಅಗತ್ಯ ದಿನಬಳಕೆ ವಸ್ತುಗಳ ಪೂರೈಕೆ,ಆಹಾರ   ಹಾಗೂ ಇತರ ಸಹಾಯಗಳಿಗೆ ಸಹಕರಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ತರುಣ್ ಚುಗ್ ರವರು, ಬಿಜೆಪಿ ಹಾಗೂ ಅದರ ಯುವ ಘಟಕವು ಇಂತಹ ಸಂದಿಗ್ಧ  ಪರಿಸ್ಥಿತಿಯಲ್ಲಿ ಇಡೀ ದೇಶಾದ್ಯಂತ ನಾಗರಿಕರ ಸಹಾಯಕ್ಕೆ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ. 

ನಂತರ ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ, ದೇಶದ ನಾಗರಿಕರ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಒದಗಿಸುತ್ತಿರುವ  ಬಿಜೆಪಿ ಕಾರ್ಯಕರ್ತರೆಲ್ಲರಿಗೂ ಕೃತಜ್ಞತೆ ತಿಳಿಸಿದ್ದಾರೆ, "ದೇಶಾದ್ಯಂತ ಇಂದು ಆಸ್ಪತ್ರೆ ಸೇರುತ್ತಿರುವ ಶೇ.95-98 ರಷ್ಟು ಸೋಂಕಿತರೆಲ್ಲರಿಗೂ ಅಗತ್ಯ ಮಾಹಿತಿ, ಡಾಕ್ಟರ್ ರೊಂದಿಗಿನ ಸಮಾಲೋಚನೆ ಕೊರತೆಯಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಹೋಮ್ ಕ್ವಾರಂಟೈನ್, ಕೋವಿಡ್-19 ಗುಣಲಕ್ಷಣಗಳು, ಆಸ್ಪತ್ರೆ ನೋಂದಣಿ ಕುರಿತಂತೆ ಹಲವು ಸೇವೆಗಳನ್ನು ಸಹಾಯವಾಣಿ ಮೂಲಕ ವೈದ್ಯರೊಂದಿಗಿನ ಸಮಾಲೋಚನೆ/ ನೆರವಿನಿಂದ ಪಡೆಯಬಹುದು" ಎಂದು ಹೇಳಿದ್ದಾರೆ.

ಈ ಸಹಾಯವಾಣಿಯ ಆರಂಭಕ್ಕೆ ಹಲವು ಸ್ಟಾರ್ಟ್ಅಪ್ ಗಳು ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳು ಬಿಜೆಪಿ ಯುವ ಮೋರ್ಚಾ ದೊಂದಿಗೆ ಕೈ ಜೋಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com