ನವದೆಹಲಿ: ಕೋವಿಡ್ ಸೋಂಕಿತರಿಗೆ ಆಸ್ಪತ್ರೆ ಸ್ಥಾಪಿಸಲು ಮತ್ತು ನಿರ್ವಹಿಸಲು ಹಾಗೂ ಕ್ವಾರಂಟೈನ್ ವ್ಯವಸ್ಥೆ ಮಾಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ಸೇನಾಪಡೆಗಳಿಗೆ ತುರ್ತು ಆರ್ಥಿಕ ಅಧಿಕಾರವನ್ನು ಮಂಜೂರು ಮಾಡಿದ್ದಾರೆ.
ಈ ತುರ್ತು ಅಧಿಕಾರವನ್ನು ಮೇ 1 ರಿಂದ ಜುಲೈ 31 ರವರೆಗೆ ಮೂರು ತಿಂಗಳ ಅವಧಿಗೆ ನೀಡಲಾಗಿದೆ. ಕಳೆದ ವಾರ ಸಶಸ್ತ್ರ ಪಡೆಗಳ ವೈದ್ಯಕೀಯ ಅಧಿಕಾರಿಗಳಿಗೂ ಸಹ ಇದೇ ರೀತಿಯ ತುರ್ತು ಅಧಿಕಾರವನ್ನು ಹೆಚ್ಚುವರಿಯಾಗಿವೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಸೇನಾಪಡೆಗಳ ಉಪ ಮುಖ್ಯಸ್ಥರು ಮತ್ತು ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ಸ್ (ಜಿಒಸಿ-ಇನ್-ಸಿಎಸ್) ಮತ್ತು ಸಮಾನ ಶ್ರೇಣಿ ಅಧಿಕಾರಿಗಳಿಗೆ ಕರೋನಾ ವೈರಸ್ ಬಿಕ್ಕಟ್ಟನ್ನು ಎದುರಿಸಲು ಖರೀದಿ ಪ್ರಸ್ತಾಪಗಳನ್ನು ಮಂಜೂರು ಮಾಡಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್ ವಿರುದ್ಧದ ರಾಷ್ಟ್ರವ್ಯಾಪಿ ಹೋರಾಟದ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸಲು ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡಲು ವಿಶೇಷ ನಿಬಂಧನೆಗಳನ್ನು ಮತ್ತು ತುರ್ತು ಆರ್ಥಿಕ ಅಧಿಕಾರವನ್ನು ನೀಡಲಾಗಿದೆ ಎಂದು ರಾಜನಾಥ್ ಸಿಂಗ್ ಕಚೇರಿ ತಿಳಿಸಿದೆ.
Advertisement