ಆಗ್ರಾ: ಕೋವಿಡ್-19 ನಿಂದ ಬಳಲುತ್ತಿದ್ದ ತನ್ನ ತಾಯಿಗೆ ಆಕ್ಸಿಜನ್ ಸಿಲೆಂಡರ್ ಕೊಂಡೊಯ್ಯುತ್ತಿದ್ದ ಯುವಕನಿಂದ ಸಿಲೆಂಡರ್ ಕಸಿದುಕೊಂಡ ಆರೋಪದಲ್ಲಿ ಆರಕ್ಷಕನ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಯುವಕನಿಂದ ಒತ್ತಾಯಪೂರ್ವಕವಾಗಿ ಆಕ್ಸಿಜನ್ ಸಿಲೆಂಡರ್ ನ್ನು ಆರಕ್ಷಕ ಕಸಿದುಕೊಂಡು ಹೋಗಿದ್ದ. ಪೊಲೀಸ್ ಅಧಿಕಾರಿಗೆ ಆಕ್ಸಿಜನ್ ಸಿಲೆಂಡರ್ ನೀಡುವಂತೆ ಪಿಪಿಇ ಕಿಟ್ ಧರಿಸಿದ್ದ ಯುವಕ ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ.
ಆಕ್ಸಿಜನ್ ಸಿಗದೇ ಇದ್ದರೆ ನನ್ನ ತಾಯಿ ಸಾವನ್ನಪ್ಪುತ್ತಾರೆ ಎಂದು ಯುವಕ ಮನವಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು ಆರಕ್ಷಕನ ಕಿರಾತಕ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಕೊನೆಗೂ ಆಕ್ಸಿಜನ್ ಸಿಗದೇ ಯುವಕನ ತಾಯಿ ಮೃತಪಟ್ಟಿದ್ದಾರೆ. ಯುವಕ ಅಂಶ್ ಗೋಯಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, "ವಿಐಪಿ ರೋಗಿಗಾಗಿ ಪೊಲೀಸರು ಕಸಿದುಕೊಂಡು ಹೋದರು. ನಮ್ಮ ತಾಯಿಗೆ ಆಕ್ಸಿಜನ್ ಲಭ್ಯವಾಗದೇ ಸಾವನ್ನಪ್ಪಿದ್ದಾರೆ" ಎಂದು ಹೇಳಿದ್ದಾರೆ.
ಈ ಘಟನೆ ಬಗ್ಗೆ ಎಡಿಜಿ ರಾಜೀವ್ ಕೃಷ್ಣ ಮಾತನಾಡಿದ್ದು, "ತಪ್ಪಿತಸ್ಥ ಪೊಲೀಸ್ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಆರೋಪ ಕೇಳಿಬಂದ ಪ್ರಾರಂಭದಲ್ಲಿ ಸ್ಥಳೀಯ ಪೊಲೀಸರು ಆರೋಪವನ್ನು ನಿರಾಕರಿಸಿ, ಅದು ಖಾಲಿ ಆಕ್ಸಿಜನ್ ಸಿಲೆಂಡರ್ ಗಳಾಗಿತ್ತು ಎಂದು ಸಮರ್ಥನೆ ನೀಡಿದ್ದಾರೆ. ಎಸ್ ಪಿ ಆರೋಪವನ್ನು ನಿರಾಕರಿಸಿದ್ದು, "ಆಕ್ಸಿಜನ್ ಸಿಲೆಂಡರ್ ನೀಡುವಂತೆ ಯುವಕ ಪೊಲೀಸ್ ಅಧಿಕಾರಿಗೆ ಮನವಿ ಮಾಡಿದರು. ಯಾರೂ ಸಿಲೆಂಡರ್ ನ್ನು ಕಸಿದಿಲ್ಲ, ವಿಡಿಯೋ ದಾರಿತಪ್ಪಿಸುವಂತಿದೆ ಎಂದು ಹೇಳಿದ್ದಾರೆ, ಆದರೆ ಖಾಲಿ ಸಿಲೆಂಡರ್ ನ್ನು ಪೊಲೀಸ್ ನವರು ಏಕೆ ಕಸಿದುಕೊಂಡರು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
Advertisement