ನವದೆಹಲಿ: ನೂತನ ಐಟಿ ನಿಯಮಗಳ ಅನುಸಾರ ಖಾಯಂ ಆಧಾರದ ಮೇಲೆ ಮುಖ್ಯ ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಟ್ವಿಟರ್ ಇಂಕ್ ಶುಕ್ರವಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.
ಆದಾಗ್ಯೂ, ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಈ ಕುರಿತು ಸಲ್ಲಿಸಿದ ಅಫಿಡವಿಟ್ ದಾಖಲೆಯಲ್ಲಿ ಇಲ್ಲ ಎಂದು ಹೇಳಿದ ನ್ಯಾಯಾಲಯ, ಅದನ್ನು ದಾಖಲೆಗೆ ತರಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಟ್ವಿಟರ್ಗೆ ಕೇಳಿದೆ.
ಕೇಂದ್ರ ಸರ್ಕಾರದ ಪರ ವಕೀಲರು ಸೇರಿದಂತೆ ಇತರರಿಗೆ ಅಫಿಡವಿಟ್ ಪ್ರತಿಗಳನ್ನು ನೀಡಲಾಗಿದೆಯೇ ಎಂದು ನ್ಯಾಯಾಧೀಶೆ ರೇಖಾ ಪಲ್ಲಿ ಕೇಳಿದರು. ಹೊಸ ಐಟಿ ನಿಯಮಗಳ ಅನುಸಾರವಾಗಿ ಆಗಸ್ಟ್ 4 ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲಾಗಿದೆ, ಈ ಹಿಂದಿನ ಕೋರ್ಟ್ ಆದೇಶದ ಅನುಸಾರ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಟ್ವಿಟರ್ ಪರ ಹಿರಿಯ ವಕೀಲ ಸಜ್ಜನ್ ಪೂವಯ್ಯ ಹೇಳಿದರು.
ಹಾಗಾದರೆ ಈಗ ಅವರು ಅನುಸರಿಸುತ್ತಿದ್ದಾರೆಯೇ ಎಂದು ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟಿರ್ ಜನರಲ್ ಚೇತನ್ ಶರ್ಮಾ ಅವರನ್ನು ನ್ಯಾಯಾಲಯ ಪ್ರಶ್ನಿಸಿತು. ಮೇಲ್ನೋಟಕ್ಕೆ ಹಾಗೆ ಕಾಣುತ್ತದೆ ಆದರೆ ನಾವು ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ಮುಖ್ಯ ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯನ್ನು ನೇಮಕ ಮಾಡದ ಟ್ವಿಟರ್ ಇಂಕ್ ಕಂಪನಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
Advertisement