ಚೆನ್ನೈ: 1971ರ ಯುದ್ಧ ವೀರ ಮತ್ತು ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿ ಮಹಾ ವೀರ ಚಕ್ರ ಪಡೆದಿದ್ದ ಕಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ ಅವರು ಭಾನುವಾರ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಗೋಪಾಲ್ ರಾವ್ ಅವರು ಡಿಸೆಂಬರ್ 4, 1971 ರಂದು ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದ ಟಾಸ್ಕ್ ಗ್ರೂಪ್ ನ ಭಾಗವಾಗಿದ್ದ ಐಎನ್ಎಸ್ ಕಿಲ್ತಾನ್ ಮತ್ತು ಐಎನ್ಎಸ್ ಕಾಟ್ಚಾಲ್ ನ ಕಮಾಂಡರ್ ಆಗಿದ್ದರು. ಆ ದಾಳಿಯ ದಿನವನ್ನು ಈಗ ನೌಕಾಪಡೆಯ ದಿನವೆಂದು ಆಚರಿಸಲಾಗುತ್ತಿದೆ.
ರಕ್ಷಣಾ ಸಚಿವಾಲಯದ ಪ್ರಕಟಣೆ ಪ್ರಕಾರ, ಕಮಾಂಡರ್ ಗೋಪಾಲ್ ರಾವ್ ಅವರು ವೆಸ್ಟರ್ನ್ ಫ್ಲೀಟ್ ನ ಒಂದು ಸಣ್ಣ ಟಾಸ್ಕ್ ಗ್ರೂಪ್ ಅನ್ನು ಮುನ್ನಡೆಸಿದರು ಮತ್ತು ಕರಾಚಿಯ ಶತ್ರು ಕರಾವಳಿಯಲ್ಲಿ ಡಿಸೆಂಬರ್ 4, 1971 ರ ರಾತ್ರಿ ಆಕ್ರಮಣಕಾರಿ ಸ್ವೀಪ್ ನಡೆಸಿದ್ದರು.
ನವೆಂಬರ್ 13, 1926 ರಂದು ಮಂಗಳೂರಿನಲ್ಲಿ ಜನಿಸಿದ ಕಮಾಂಡರ್ ರಾವ್ ಅವರು ಏಪ್ರಿಲ್ 21, 1950 ರಂದು ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದ್ದರು. ಗನ್ನರಿಯಲ್ಲಿ ಪರಿಣಿತರಾಗಿದ್ದ ರಾವ್ ಪೂರ್ವ ನೌಕಾ ಕಮಾಂಡ್ ನಲ್ಲಿ ಐಎನ್ ಎಸ್ ಕಿಲ್ತಾನ್ ನ ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಆದಾಗ್ಯೂ, ಪಾಕಿಸ್ತಾನದ ವಿರುದ್ಧ ಯುದ್ಧ ಸನ್ನಿಹಿತವಾಗಿದ್ದಾಗ, ಆಗಿನ ನೌಕಾಪಡೆಯ ಮುಖ್ಯಸ್ಥರಾಗಿದ್ದ ಅಡ್ಮಿರಲ್ ಎಸ್.ಎಂ.ನಂದಾ ಅವರು ಪಾಕಿಸ್ತಾನದ ವಿರುದ್ಧ ಆಪರೇಷನ್ ಟ್ರೈಡೆಂಟ್ ಅನ್ನು ಆಜ್ಞಾಪಿಸಲು ಪಶ್ಚಿಮ ನೌಕಾಪಡೆಗೆ ಸೇರಲು ರಾವ್ ಅವರನ್ನು ವೈಯಕ್ತಿಕವಾಗಿ ನೇಮಿಸಿದ್ದರು.
Advertisement