ಚಂಢೀಗಡ: ಹರಿಯಾಣದ ಸೋನಿಪತ್ ಹಳ್ಳಿಯೊಂದರಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ನಾಲ್ವರು ಸೇರಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕುಂಡ್ಲಿ ಪೊಲೀಸ್ ಠಾಣೆಯ ಎಸ್ಎಚ್ಒ ರವಿಕುಮಾರ್ ತಿಳಿಸಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣ ಪ್ರಮುಖ ಆರೋಪಿಗಳು 22 ರಿಂದ 25 ವರ್ಷ ವಯಸ್ಸಿನವರಾಗಿದ್ದು ಇವರೆಲ್ಲಾ ವಲಸೆ ಕಾರ್ಮಿಕರಾಗಿದ್ದಾರೆ. ಇವರೆಲ್ಲಾ ಮೃತ ಬಾಲಕಿಯರ ಮನೆಯ ಪಕ್ಕದಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಮೃತ ಸಹೋದರಿಯರು 14 ಮತ್ತು 16 ವರ್ಷ ವಯಸ್ಸಿನವರಾಗಿದ್ದು ತಮ್ಮ ತಾಯಿಯೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದರು.
ಆಗಸ್ಟ್ 5 ಮತ್ತು 6ರ ಮಧ್ಯರಾತ್ರಿ ಆರೋಪಿಗಳು ಬಲವಂತವಾಗಿ ಮನೆಗೆ ನುಗ್ಗಿ ತಾಯಿಗೆ ಬೆದರಿಕೆ ಹಾಕಿದ್ದಾರೆ. ನಂತರ ನಾಲ್ವರು ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಅವರಿಗೆ ಕೀಟನಾಶಕ ಸೇವಿಸುವಂತೆ ಒತ್ತಾಯಿಸಿ ಕುಡಿಸಿದ್ದಾರೆ ಎಂದು ಎಸ್ಎಚ್ಒ ಹೇಳಿದೆ.
ಬಾಲಕಿಯರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ಆರೋಪಿಗಳು ಬಾಲಕಿಯರ ತಾಯಿಗೆ ತನ್ನ ಮಕ್ಕಳಿಗೆ ಹಾವು ಕಚ್ಚಿರುವುದಾಗಿ ಪೊಲೀಸರಿಗೆ ತಿಳಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಹುಡುಗಿಯರನ್ನು ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಇಬ್ಬರು ಹುಡುಗಿಯರಲ್ಲಿ ಒಬ್ಬಳು ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು. ನಂತರ ಆಕೆಯ ಸಹೋದರಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.
ಜೀವಭಯದಿಂದ ಆರಂಭದಲ್ಲಿ ಹುಡುಗಿಯರ ತಾಯಿ ಆಸ್ಪತ್ರೆಯ ಅಧಿಕಾರಿಗಳಿಗೂ ಇಬ್ಬರು ಸಹೋದರಿಯರಿಗೆ ಹಾವು ಕಚ್ಚಿದೆ ಎಂದು ಹೇಳಿದ್ದರು ಎಂದು ಎಸ್ಎಚ್ಒ ತಿಳಿಸಿದ್ದಾರೆ.
ಆದರೆ ಈ ಪ್ರಕರಣ ಸಂಬಂಧ ಅನುಮಾನಗಳು ಕಾಡಿದ್ದರಿಂದ ನಾವು ಮಹಿಳೆಯನ್ನು ತೀವ್ರವಾಗಿ ಪ್ರಶ್ನಿಸಿದಾಗ ಆಕೆ ನೈಜ ಘಟನೆಯನ್ನು ವಿವರಿಸಿದರು. ನಂತರ ಮರಣೋತ್ತರ ಪರೀಕ್ಷೆಯ ವರದಿಯು ಲೈಂಗಿಕ ದೌರ್ಜನ್ಯ ಮತ್ತು ವಿಷಪೂರಿತವಾಗಿದೆ ಎಂದು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಎಚ್ಒ ಹೇಳಿದರು.
Advertisement