ಶ್ರೀನಗರ: ಪಾಕಿಸ್ತಾನದ ಸ್ವಾತಂತ್ರೋತ್ಸವದ ಅಂಗವಾಗಿ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೈನಿಕರು ಸಿಹಿ ವಿನಿಮಯ ಮಾಡಿಕೊಂಡು, ಶುಭ ಹಾರೈಸಿದ್ದಾರೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್ಧರ್ ಸೆಕ್ಟರ್ನಲ್ಲಿರುವ ಚಿಲೇಹಾನಾ ತಿತ್ವಾಲ್ ಕ್ರಾಸಿಂಗ್ ಪಾಯಿಂಟ್ನಲ್ಲಿ ಭಾರತೀಯ ಸೇನಾ ಸಿಬ್ಬಂದಿ, ಪಾಕ್ ಸೈನಿಕರು ಸಿಹಿಯನ್ನು ನೀಡಿದರು.
ಆಗಸ್ಟ್ 14 ರಂದು ಚಿಲೇಹಾನಾ ತಿತ್ವಾಲ್ ಕ್ರಾಸಿಂಗ್ ಪಾಯಿಂಟ್ನಲ್ಲಿ ಭಾರತೀಯ ಸೇನೆಯು ಸೌಹಾರ್ದಯುತ ಸಂಬಂಧವಾಗಿ ಪಾಕಿಸ್ತಾನ ಸೈನ್ಯಕ್ಕೆ ಸಿಹಿಯನ್ನು ಉಡುಗೊರೆಯಾಗಿ ನೀಡಿತು ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿ ಎಲ್ಒಸಿಯ ಉದ್ದಕ್ಕೂ ಶಾಂತಿ ಕಾಪಾಡುವ ಇಚ್ಛೆಯನ್ನು ಪ್ರದರ್ಶಿಸಿತು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವು ವರ್ಷಗಳಿಂದ, ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಜನರು ನಿಯಂತ್ರಣ ರೇಖೆಯ ಉದ್ದಕ್ಕೂ ಹಳ್ಳಿಗಳಲ್ಲಿ ಶಾಂತಿ ಕಾಪಾಡುವ ಭಾರತೀಯ ಸೇನೆಯ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಭಾರತೀಯ ಸೇನೆಯ ಈ ಸಕಾರಾತ್ಮಕ ಪ್ರಯತ್ನಗಳು ನಿಯಂತ್ರಣ ರೇಖೆಯ ಉದ್ದಕ್ಕೂ ಸುದೀರ್ಘ ಶಾಂತಿಗೆ ಕಾರಣವಾಗುತ್ತವೆ ಎಂದು ಅಧಿಕಾರಿ ಹೇಳಿದರು.
Advertisement