ಕೋಲ್ಕತ್ತ: ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅತ್ಯಾಚಾರ, ಹತ್ಯೆಗಳ ಪ್ರಕರಣಗಳ ಸಿಬಿಐ ತನಿಖೆ ನಡೆಸಲು ಕೋಲ್ಕತ್ತ ಹೈಕೋರ್ಟ್ ಆದೇಶ ನೀಡಿದೆ.
ಹಂಗಾಮಿ ಮುಖ್ಯನ್ಯಾಯಮೂರ್ತಿ ರಾಜೇಶ್ ಬಿಂದಾಲ್ ನೇತೃತ್ವದ ಪಂಚ ಸದಸ್ಯಪೀಠ ಸಿಬಿಐ ತನಿಖೆಗೆ ಆದೇಶ ನೀಡಿದ್ದು ಜೊತೆಗೆ ಎಸ್ಐಟಿ ಯನ್ನೂ ರಚಿಸಲು ಸೂಚಿಸಿದೆ.
ಎರಡೂ ತನಿಖೆಗಳನ್ನು ಕೋರ್ಟ್ ಮೇಲ್ವಿಚಾರಣೆ ನಡೆಸುವುದಾಗಿ ನ್ಯಾಯಲಯ ಹೇಳಿದೆ. ಚುನಾವಣೋತ್ತರ ಗಲಭೆಗಳ ತನಿಖೆಗೆ ಸಂಬಂಧಿಸಿದ ವರದಿಯನ್ನು ಇನ್ನು 6 ವಾರಗಳಲ್ಲಿ ಸಲ್ಲಿಸಬೇಕೆಂದು ಕೇಂದ್ರೀಯ ತನಿಖಾ ದಳಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.
ಐಪಿಎಸ್ ಅಧಿಕಾರಿಗಳು, ಟೆಲಿಕಮ್ಯುನಿಕೇಷನ್ಸ್ ವಿಭಾಗದ ಪ್ರಧಾನ ನಿರ್ದೇಶಕ, ಸುಮನ್ ಬಾಲ ಸಾಹೂ, ಕೋಲ್ಕತ್ತಾ ಪೊಲೀಸ್ ಆಯುಕ್ತ ಸೌಮೆನ್ ಮಿತ್ರ ಹಾಗೂ ರಣ್ ವೀರ್ ಕುಮಾರ್ ಅವರನ್ನು ಎಸ್ಐಟಿ ಒಳಗೊಂಡಿರಲಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಗಲಭೆಗಳಿಗೆ ಸಂಬಂಧಿಸಿದಂತೆ ಎನ್ ಹೆಚ್ಆರ್ ಸಿ ವರದಿಯನ್ನು ಗಮನಿಸಿದ್ದ ಕೋಲ್ಕತ್ತಾ ನ್ಯಾಯಾಲಯ ಮೇಲ್ನೋಟಕ್ಕೆ ಮಮತಾ ಸರ್ಕಾರ ತಪ್ಪು ಹೆಜ್ಜೆ ಇಟ್ಟಿರುವುದು ಕಂಡುಬಂದಿದೆ ಎಂದಿತ್ತು.
ಚುನಾವಣೋತ್ತರ ಗಲಭೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಧರಿಸಿ ಪರಿಸ್ಥಿತಿಯನ್ನು ಅವಲೋಕಿಸಲು ಸಮಿತಿ ರಚನೆಗೆ ಕೋರ್ಟ್ ಜೂ.18 ರಂದು ಎನ್ ಹೆಚ್ ಆರ್ ಸಿಗೆ ನಿರ್ದೇಶನ ನೀಡಿತ್ತು.
Advertisement