ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ನಿಧನ: ಗಣ್ಯರ ಸಂತಾಪ

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶ ಮಾಜಿ ಸಿಎಂ, ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ (89) ಆ.21 ರಂದು ನಿಧನರಾದರು.
ಕಲ್ಯಾಣ್ ಸಿಂಗ್
ಕಲ್ಯಾಣ್ ಸಿಂಗ್

ಲಖನೌ: ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶ ಮಾಜಿ ಸಿಎಂ, ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ (89) ಆ.21 ರಂದು ನಿಧನರಾದರು.

ಸೆಪ್ಸಿಸ್ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಕಲ್ಯಾಣ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ.

ಲಖನೌ ನಲ್ಲಿರುವ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಸ್ ಜಿಪಿಜಿಐ) ನಲ್ಲಿ ಕಲ್ಯಾಣ್ ಸಿಂಗ್ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.  "ಕಲ್ಯಾಣ್ ಸಿಂಗ್ ಅವರು ಸಮಾಜದ ಹಿಂದುಳಿದ ವರ್ಗದ ಕೋಟ್ಯಾಂತರ ಜನರ ಧ್ವನಿಯಾಗಿದ್ದರು. ರೈತರ, ಯುವಜನರ ಸಬಲೀಕರಣಕ್ಕೆ ಕಲ್ಯಾಣ್ ಸಿಂಗ್ ಶ್ರಮಿಸಿದ್ದಾರೆ.  ಅವರ ನಿಧನದಿಂದ ಉಂಟಾಗಿರುವ ದುಃಖವನ್ನು ಹೇಳಲು ಶಬ್ದಗಳಿಲ್ಲ. ಕಲ್ಯಾಣ್ ಸಿಂಗ್ ಅವರು ಮುತ್ಸದ್ದಿ, ಹಿರಿಯ ಆಡಳಿತಗಾರ, ಶ್ರೇಷ್ಠ ವ್ಯಕ್ತಿ" ಎಂದು ಮೋದಿ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
 

ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿ ಕಲ್ಯಾಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

1992 ರಲ್ಲಿ ಬಾಬ್ರಿ ಮಸೀದಿ ಎನ್ನಲಾಗಿದ್ದ ಕಟ್ಟಡ ಧ್ವಂಸಗೊಂಡಿದ್ದಾಗ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಕಟ್ಟಡ ನೆಲಕ್ಕೆ ಉರುಳಿದ ದಿನವೇ ಕಲ್ಯಾಣ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1997 ರಲ್ಲಿ ಮತ್ತೊಮ್ಮೆ ಸಿಎಂ ಆದರಾದರೂ 1999 ರಲ್ಲಿ ಅವರನ್ನು ಪಕ್ಷ ಪದಚ್ಯುತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿದ್ದ ಕಲ್ಯಾಣ್ ಸಿಂಗ್ ತಮ್ಮದೇ ಸ್ವಂತ ಪಕ್ಷ ರಚಿಸಿದ್ದರು. ನಂತರ ಬಿಜೆಪಿಗೆ ವಾಪಸ್ಸಾಗಿದ್ದರು.

ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾನಿ, ಮುರಳಿ ಮನೋಹರ ಜೋಷಿ ಅವರೊಂದಿಗೆ ಕಲ್ಯಾಣ್ ಸಿಂಗ್ ಸಹ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಎದುರಿಸಿ ನಿರ್ದೋಷಿಯಾಗಿ ಹೊರಬಂದಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com