ನವದೆಹಲಿ: ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಿಂದ 168 ಭಾರತೀಯರನ್ನು ಹೊತ್ತು ಬಂದ ಐಎಎಫ್ ನ ವಿಶೇಷ ವಿಮಾನ ಭಾರತ ತಲುಪುತ್ತಿದ್ದಂತೆಯೇ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಿಎಎ ಬಗ್ಗೆ ಮಾತನಾಡಿದ್ದಾರೆ.
ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಏಕೆ ಅಗತ್ಯ ಎಂಬುದಕ್ಕೆ ನೆರೆ ರಾಷ್ಟ್ರ ಅಫ್ಘಾನಿಸ್ತಾನದಲ್ಲಿನ ಅಸ್ಥಿರ ಪರಿಸ್ಥಿತಿ ಕಾರಣ ಹೇಳುತ್ತದೆ ಎಂದು ಲೇಖನವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
"ಅಸ್ಥಿರತೆಗೊಳಗಾಗಿರುವ ನೆರೆಯ ಅಫ್ಘಾನಿಸ್ತಾನದಲ್ಲಿ ಸಿಖ್ಖರು ಹಾಗು ಹಿಂದೂಗಳು ಎದುರಿಸುವ ಕರಾಳ ಪರಿಸ್ಥಿತಿ ಸಿಎಎ ಏಕೆ ಬೇಕು ಎಂಬುದಕ್ಕೆ ನಿಖರವಾದ ಉತ್ತರ ನೀಡುತ್ತದೆ" ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಕಳೆದ ವಾರ ಅಫ್ಘಾನಿಸ್ತಾನ ತಾಲೀಬಾನ್ ವಶವಾದ ನಂತರಲ್ಲಿ ಅಲ್ಲಿನ ಬಹುತೇಕ ಮಂದಿ ದೇಶ ತೊರೆಯುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಬದ್ಧವಾಗಿದೆ ಎಂದು ಎಂಇಎ ಹೇಳಿದೆ.
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಲ್ಲಿ ಅಲ್ಪಸಂಖ್ಯಾತರೆಂಬ ಕಾರಣಕ್ಕೆ ಧಾರ್ಮಿಕ ದೌರ್ಜನ್ಯ, ಕಿರುಕುಳಕ್ಕೆ ಒಳಗಾಗಿರುವ ಹಿಂದೂಗಳು, ಸಿಖ್, ಜೈನ, ಬೌದ್ಧ, ಪಾರ್ಸಿ, ಕ್ರೈಸ್ತ ಸಮುದಾಯದವರಿಗೆ ಭಾರತದಲ್ಲಿ ಪೌರತ್ವ ನೀಡುವುದು ಸಿಎಎಯ ಉದ್ದೇಶವಾಗಿದೆ. ಈ ಕಾಯ್ದೆಗೆ ವಿಪಕ್ಷಗಳು ಹಾಗೂ ಹಲವು ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು.
Advertisement