ವಂದೇ ಮಾತರಂ ಹಾಡುವುದಕ್ಕೆ ಎಂಐಎಂ ಶಾಸಕರ ನಕಾರ; ಬಿಹಾರ ವಿಧಾನಸಭೆಯಲ್ಲಿ ವಿವಾದ!

ಬಿಹಾರ ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನ ಅಂತ್ಯಗೊಂಡಿದ್ದು, ಕೊನೆಯ ದಿನದಂದು ವಂದೇ ಮಾತರಂ ಹಾಡುವುದಕ್ಕೆ ಎಂಐಎಂ ಶಾಸಕರು ನಿರಾಕರಿಸಿದ ಘಟನೆ ವರದಿಯಾಗಿದೆ.
ವಂದೇ ಮಾತರಂ (ಸಾಂಕೇತಿಕ ಚಿತ್ರ)
ವಂದೇ ಮಾತರಂ (ಸಾಂಕೇತಿಕ ಚಿತ್ರ)

ಪಾಟ್ನ: ಬಿಹಾರ ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನ ಅಂತ್ಯಗೊಂಡಿದ್ದು, ಕೊನೆಯ ದಿನದಂದು ವಂದೇ ಮಾತರಂ ಹಾಡುವುದಕ್ಕೆ ಎಂಐಎಂ ಶಾಸಕರು ನಿರಾಕರಿಸಿದ ಘಟನೆ ವರದಿಯಾಗಿದೆ.

ಐವರು ಶಾಸಕರು ವಂದೇ ಮಾತರಂ ಹಾಡುವುದಕ್ಕೆ ನಿರಾಕರಿಸಿದ್ದು, ರಾಷ್ಟ್ರಗೀತೆ ಹಾಡುವುದಕ್ಕೆ ನಮಗೆ ಸಮಸ್ಯೆ ಇಲ್ಲ. ಆದರೆ ವಂದೇ ಮಾತರಂ ಹಾಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಶಾಸಕ ಅಖ್ತರ್ ಉಲ್ ಇಮಾನ್ ಹೇಳಿದ್ದಾರೆ. 

ವಿಧಾನಸಭಾಧ್ಯಕ್ಷರು ವಂದೇ ಮಾತರಂ ಹೇಳುವಂತೆ ಸಭಾಸದಸ್ಯರಿಗೆ ಸೂಚಿಸುವ ಹೊಸ ಪದ್ಧತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ಹಳೆಯ (ರಾಷ್ಟ್ರಗೀತೆ ಹಾಡುವ) ಪದ್ಧತಿ ಮುಂದುವರೆಯಬೇಕು ಎಂದು ಅಖ್ತರ್ ಉಲ್ ಇಮಾನ್ ಹೇಳಿದ್ದಾರೆ. 

ಪ್ರತಿ ಸಂದರ್ಭದಲ್ಲಿಯೂ ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಹಾಡನ್ನು ಹಾಡುವ ಕಾರಣವನ್ನು ಅಖ್ತರ್ ಉಲ್ ಇಮಾನ್ ಕೇಳಿದ್ದಾರೆ.
 
ಕೆಲವರು ಸಸ್ಯಾಹಾರಿಗಳಾಗಿರುತ್ತಾರೆ. ಇನ್ನೂ ಕೆಲವರು ಮಾಂಸಾಹಾರಿಗಳಾಗಿರುತ್ತಾರೆ. ಆಯ್ಕೆ ಮಾಡಿಕೊಳ್ಳುವುದು ಆ ವ್ಯಕ್ತಿಗೆ ಬಿಟ್ಟ ವಿಷಯ ಅಂತೆಯೇ ಹೊಸ ಪದ್ಧತಿಯನ್ನು ಪ್ರತಿ ಸಭಾಸದಸ್ಯನ ಮೇಲೆಯೂ ಹೇರುವಂತಿಲ್ಲ. ವಂದೇ ಮಾತರಂ ಹೇಳುವುದಕ್ಕೆ ನನ್ನ ಆಕ್ಷೇಪವಿದೆ ಎಂದು ಅಖ್ತರ್ ಉಲ್ ಇಮಾನ್ ತಿಳಿಸಿದ್ದಾರೆ. 

ದೇಶದ ಸಂವಿಧಾನದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿರುವ ಅಖ್ತರ್ ಉಲ್ ಇಮಾನ್ ನಂಬಿಕೆ ಇರುವುದರಿಂದಲೇ ಚುನಾವಣೆ ಎದುರಿಸಿ ಪ್ರಜಾಪ್ರಭುತ್ವದ ಆಧಾರದಲ್ಲಿ ಗೆದ್ದು ಬಂದಿದ್ದೇನೆ. ಆದರೆ ನಮ್ಮ ಸಂವಿಧಾನ ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರಗೀತೆಯನ್ನು ಹಾಡಬೇಕೆಂಬುದನ್ನು ಕಡ್ಡಾಯಗೊಳಿಸಿಲ್ಲ ಎಂದು ಹೇಳಿದ್ದಾರೆ.
 
ಬಿಜೆಪಿ ಎಂಐಎಂ ನಡೆಗೆ ತೀವ್ರ ಟೀಕೆ ಮಾಡಿದ್ದು, ಇಮಾನ್ ಅವರ ಹೇಳಿಕೆಗಳು ಅವರ ಉದ್ದೇಶ, ಆಂತರ್ಯವನ್ನು ಸ್ಪಷ್ಟಪಡಿಸುತ್ತಿದೆ ಎಂದು ಹೇಳಿದೆ. ವಂದೇ ಮಾತರಂ ಹಾಡಲು ಎಂಐಎಂ ಶಾಸಕರು ನಿರಾಕರಿಸುವುದು ಆತಂಕಕಾರಿ ಎಂದು ಬಿಜೆಪಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com