ಪಾಕ್ನೊಂದಿಗಿನ ನೇರ ಯುದ್ಧವನ್ನೇ ಗೆದ್ದಿದ್ದೇವೆ; ಪಾಕ್ ಪ್ರೇರಿತ ಭಯೋತ್ಪಾದನೆ ಪರೋಕ್ಷ ಯುದ್ಧದಲ್ಲೂ ಗೆಲ್ಲುತ್ತೇವೆ: ರಾಜನಾಥ್ ಸಿಂಗ್
1971ರಲ್ಲಿ ಪಾಕಿಸ್ತಾನದ ವಿರುದ್ಧದ ನೇರ ಯುದ್ಧದಲ್ಲಿ ಗೆದ್ದಿದ್ದೇವೆ. ಇನ್ನು ಪಾಕ್ ಪ್ರಚೋದಿತ ಭಯೋತ್ಪಾದನೆಯ ಪರೋಕ್ಷ ಯುದ್ಧದಲ್ಲೂ ಗೆಲ್ಲುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Published: 12th December 2021 09:23 PM | Last Updated: 12th December 2021 09:23 PM | A+A A-

ರಾಜನಾಥ್ ಸಿಂಗ್
ನವದೆಹಲಿ: 1971ರಲ್ಲಿ ಪಾಕಿಸ್ತಾನದ ವಿರುದ್ಧದ ನೇರ ಯುದ್ಧದಲ್ಲಿ ಗೆದ್ದಿದ್ದೇವೆ. ಇನ್ನು ಪಾಕ್ ಪ್ರಚೋದಿತ ಭಯೋತ್ಪಾದನೆಯ ಪರೋಕ್ಷ ಯುದ್ಧದಲ್ಲೂ ಗೆಲ್ಲುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಸ್ಮರಣಾರ್ಥ 'ಸ್ವರ್ಣಿಮ್ ವಿಜಯ್ ಪರ್ವ್' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, 1971ರ ಯುದ್ಧವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯದ ಸಮಯದಲ್ಲಿ ಧರ್ಮದ ಹೆಸರಿನಲ್ಲಿ ಭಾರತವನ್ನು ವಿಭಜಿಸಿದ್ದು 'ಐತಿಹಾಸಿಕ ತಪ್ಪು' ಎಂದು ತೋರಿಸಿದೆ. 'ಭಯೋತ್ಪಾದನೆ ಮತ್ತು ಇತರ ಭಾರತ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಪಾಕಿಸ್ತಾನವು ಭಾರತವನ್ನು ಒಡೆಯಲು ಬಯಸಿದೆ' ಎಂದರು.
1971ರ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ವಿಜಯದ ನಗೆ ಬೀರಿದ್ದವು. ಪ್ರಸ್ತುತ ಅವರು ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದು ಹಾಕಲು ಕೆಲಸ ಮಾಡುತ್ತಿದ್ದಾರೆ ಎಂದು ಸಿಂಗ್ ಹೇಳಿದರು. ನಾವು ನೇರವಾಗಿ ಯುದ್ಧವನ್ನು ಗೆದ್ದಿದ್ದೇವೆ ಮತ್ತು ನಾವು ಪರೋಕ್ಷ ಯುದ್ಧವನ್ನು ಗೆಲ್ಲುತ್ತೇವೆ ಎಂಬ ಸಂಪೂರ್ಣ ಭರವಸೆಯನ್ನು ನೀಡುತ್ತೇನೆ ಎಂದರು.
ಗಮನಾರ್ಹವಾಗಿ, 1971ರ ಯುದ್ಧದಲ್ಲಿ ಪಾಕಿಸ್ತಾನದ ಸೋಲಿನ ನಂತರ, ಅದು ವಿಭಜನೆಯಾಯಿತು. ಬಾಂಗ್ಲಾದೇಶದ ಉಗಮವಾಯಿತು. ಈ ಯುದ್ಧವು ಧರ್ಮದ ಆಧಾರದ ಮೇಲೆ ಭಾರತವನ್ನು ವಿಭಜಿಸುವುದು ಐತಿಹಾಸಿಕ ತಪ್ಪು ಎಂದು ತೋರಿಸುತ್ತದೆ. ಪಾಕಿಸ್ತಾನ ಒಂದು ಧರ್ಮದ ಹೆಸರಿನಲ್ಲಿ ಹುಟ್ಟಿದೆ, ಆದರೆ ಅದು ಒಂದೇ ಆಗಿ ಉಳಿಯಲು ಸಾಧ್ಯವಿಲ್ಲ ಎಂದರು.