ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಅರ್ಥಶಾಸ್ತ್ರದ ಅರಿವಿಲ್ಲ: ಸುಬ್ರಮಣಿಯನ್ ಸ್ವಾಮಿ
ಪ್ರಧಾನಮಂತ್ರಿ ಮತ್ತು ವಿತ್ತ ಸಚಿವರಿಗೆ ಅರ್ಥಶಾಸ್ತ್ರದ ಬಗ್ಗೆ ಅರಿವಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದಾರೆ.
Published: 14th December 2021 09:52 AM | Last Updated: 14th December 2021 09:52 AM | A+A A-

ಸುಬ್ರಮಣಿಯನ್ ಸ್ವಾಮಿ
ಮಥುರಾ: ಪ್ರಧಾನಮಂತ್ರಿ ಮತ್ತು ವಿತ್ತ ಸಚಿವರಿಗೆ ಅರ್ಥಶಾಸ್ತ್ರದ ಬಗ್ಗೆ ಅರಿವಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿನ ಬೆಲೆ ಏರಿಕೆಗೆ ಕೇಂದ್ರ ಹಣಕಾಸು ಸಚಿವರೇ ಹೊಣೆಯಾಗಿದ್ದಾರೆ. 'ಸರ್ಕಾರಕ್ಕೆ ಅರ್ಥಶಾಸ್ತ್ರವು ಅರ್ಥವಾಗುತ್ತಿಲ್ಲ. ಈ ಬಗ್ಗೆ ಪ್ರಧಾನಿ ಅಥವಾ ಹಣಕಾಸು ಸಚಿವರಿಗೆ ತಿಳಿದಿಲ್ಲ. ಈ ವಿಚಾರವಾಗಿ ಅವರು ಯಾರ ಬಳಿಯಲ್ಲೂ ಸಮಾಲೋಚನೆ ನಡೆಸುವುದಿಲ್ಲ. ಬೆಳವಣಿಗೆ ದರ ಕುಸಿದಾಗ ಏನು ಮಾಡಬೇಕೆಂದು ಕೂಡ ಅವರಿಗೆ ತಿಳಿದಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.
ಕೆಲವು ಹಿಂದೂ ಸಂಘಟನೆಗಳ ಪ್ರಕಾರ ಈಗ ಮಸೀದಿಗಳು ಇರುವ ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ಇದ್ದವು, 'ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ, 1991 ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮೊಕದ್ದಮೆಗೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ' ಎಂದು ಹೇಳಿದರು.
1991ರ ಕಾಯ್ದೆಯ ಪ್ರಕಾರ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯಲು ಅಥವಾ ಸ್ವರೂಪದಲ್ಲಿ ಬದಲಾವಣೆ ಮಾಡಲು ಮೊಕದ್ದಮೆಯನ್ನು ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಆಗಸ್ಟ್ 15, 1947 ರಿಂದ ಚಾಲ್ತಿಯಲ್ಲಿದ್ದ ಸ್ವರೂಪದಲ್ಲೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಾಯ್ದೆ ಹೇಳುತ್ತದೆ.