ಪಣಜಿ: ಪವಿತ್ರ ಗಂಗಾ ನದಿಯನ್ನು ಚುನಾವಣೆ ವೇಳೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಳ್ಳುತ್ತಾರೆ. ಅವರು ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಎರಡು ದಿನಗಳ ಗೋವಾ ಪ್ರವಾಸದಲ್ಲಿರುವ ಮಮತಾ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 'ಮತಗಳನ್ನು ಪಡೆಯಲು ಪ್ರಧಾನಿ ಮೋದಿ ಏನು ಬೇಕಾದರೂ ಮಾಡುತ್ತಾರೆ. ಉತ್ತರಾಖಂಡದಲ್ಲಿ ತಪ್ಪಸ್ಸು (ಧ್ಯಾನ) ಮಾಡಿದ್ದರು. ಈಗ ಗಂಗಾನದಿಯಲ್ಲಿ ಸ್ನಾನ ಮಾಡಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಏನೂ ಬೇಕಾದರೂ ಮಾಡಲಿ, ಅವರಿಗೆ ಸ್ವಾತಂತ್ರ್ಯವಿದೆ. ಆದರೆ ವರ್ಷಪೂರ್ತಿ ನೀವು ಎಲ್ಲಿದ್ದಿರಿ' ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಕೋವಿಡ್-19 ಮೃತದೇಹಗಳನ್ನು ಗಂಗಾ ನದಿಗೆ ಎಸೆಯುವ ಮೂಲಕ ಅಪವಿತ್ರಗೊಳಿಸಿದೆ ಎಂದು ಯೋಗಿ ಆದಿತ್ಮನಾಥ್ ಸರ್ಕಾರದ ವಿರುದ್ಧವೂ ಟೀಕೆ ಮಾಡಿದರು. 'ನಾವು ಗಂಗಾಜಲವನ್ನು ಪವಿತ್ರ ಎಂದು ನಂಬುತ್ತೇವೆ. ತಾಯಿ ಎಂದು ಕರೆಯುತ್ತೇವೆ. ಆದರೆ ಬಿಜೆಪಿಯವರು ಕೋವಿಡ್ನಿಂದ ಸಾವಿಗೀಡಾದವರ ಮೃತದೇಹಗಳನ್ನು ಗಂಗಾ ನದಿಗೆ ಎಸೆದಿದ್ದಾರೆ' ಎಂದು ಆರೋಪಿಸಿದರು.
'ಕುಂಭ ಮೇಳದಂತೆ ಪಶ್ಚಿಮ ಬಂಗಾಳದ ಗಂಗಾಸಾಗರಕ್ಕೆ ಸುಮಾರು 23 ಲಕ್ಷ ಜನರು ಭೇಟಿ ನೀಡುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಗಂಗಾನದಿ ಪೂಜೆ ಮಾಡುವುದಿಲ್ಲ. ಆದರೆ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಹೋಗಿರುವ ಮೋದಿ, ಕೇವಲ ಮತ ಪಡೆಯಲು ಮಾತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ' ಎಂದು ಆರೋಪಿಸಿದರು. ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ್ದ ಪ್ರಧಾನಿ ಮೋದಿ, ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದರು.
Advertisement