ನವದೆಹಲಿ: ತಮಿಳುನಾಡಿನ ಮೂಲದ 13 ಮಂದಿ ಭಾರತೀಯ ಮೀನುಗಾರರನ್ನು ಅಂತಾರಾಷ್ಟ್ರೀಯ ಜಲಗಡಿ(ಐಎಂಬಿಎಲ್) ಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಸೋಮವಾರ ಸಂಜೆ ಮೀನುಗಾರರನ್ನು ಬಂಧಿಸಲಾಗಿದ್ದು, ಜಗದಪಟ್ಟಿಣಂ ನಿಂದ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿದ್ದರು ಎಂಬ ಮಾಹಿತಿ ಮೀನುಗಾರಿಕಾ ಇಲಾಖೆಯಿಂದ ಲಭ್ಯವಾಗಿದೆ.
ಐಎಂಬಿಎಲ್ ವ್ಯಾಪ್ತಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರನ್ನು ವಿಚಾರಣೆಗಾಗಿ ಶ್ರೀಲಂಕಾಗೆ ಕರೆದೊಯ್ಯಲಾಗಿದೆ.
ಈ ಪ್ರಕರಣದ ಮೂಲಕ ಈ ವರೆಗೂ ಲಂಕಾ ನೌಕಾಪಡೆ 68 ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದಿದ್ದು 55 ಮಂದಿಯನ್ನು ಬಂಧಿಸಿ ಡಿ.31 ವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ. ಇದಕ್ಕೂ ಮುನ್ನ ಡಿ.18 ರಂದು 55 ಮೀನುಗಾರರನ್ನು ಇದೇ ಆರೋಪದ ಮೇಲೆ ಲಂಕಾ ನೌಕಾಪಡೆ ವಶಕ್ಕೆ ಪಡೆದಿತ್ತು.
ಇದೇ ವೇಳೇ ಭಾರತ ಸರ್ಕಾರ ಮೀನುಗಾರರ ಬಂಧನದ ಬಗ್ಗೆ ಆತಂಕ ವ್ಯಕ್ತಪಾಡಿಸಿದ್ದು, ಕೊಲಂಬೋದಲ್ಲಿರುವ ತನ್ನ ರಾಯಭಾರಿ ಕಚೇರಿಯ ಮೂಲಕ ಮೀನುಗಾರರ ತ್ವರಿತ ಬಿಡುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಎಂಇಎ ವಕ್ತಾರರಾದ ಅರಿಂದಮ್ ಬಗಚಿ ಭರವಸೆ ನೀಡಿದ್ದಾರೆ.
Advertisement