ಭೋಪಾಲ್: ಮಧ್ಯಪ್ರದೇಶ ಸರ್ಕಾರ ಉತ್ತರ ಪ್ರದೇಶ ಮಾದರಿಯನ್ನು ಅನುಸರಿಸಲು ಮುಂದಾಗಿದ್ದು ಪ್ರತಿಭಟನಾ ನಿರತರಿಂದ ಹಾನಿಗೊಳಗಾದ ಆಸ್ತಿಯನ್ನು ಪ್ರತಿಭಟನಾ ನಿರತರಿಂದಲೇ ವಾಪಸ್ ಪಡೆಯುವುದಕ್ಕೆ ಅನುವುಮಾಡಿಕೊಡುವ ಮಸೂದೆಯನ್ನು ಮಂಡಿಸಿದೆ.
ರಾಜ್ಯ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ನರೋತ್ತಮ್ ಮಿಶ್ರಾ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಸಾರ್ವಜನಿಕ ಹಾಗೂ ಆಸ್ತಿ ಹಾನಿ ರಿಕವರಿ ಮಸೂದೆ-2021 ನ್ನು ಮಂಡಿಸಿದ್ದಾರೆ.
ಗುರುವಾರದಂದು ಈ ಮಸೂದೆ ಚರ್ಚೆಗೆ ಬರಲಿದ್ದು ಅದೇ ದಿನ ಸದನದಲ್ಲಿ ಅಂಗೀಕಾರ ಪಡೆಯುವ ಸಾಧ್ಯತೆ ಇದೆ.
ವರದಿಗಾರರೊಂದಿಗೆ ಮಾತನಾಡಿರುವ ಮಿಶ್ರಾ, "ಪ್ರತಿಭಟನೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಈ ಮಸೂದೆಯನ್ನು ಮಂಡಿಸಲಾಗಿದೆ ಗುರುವಾರದಂದು ಮಸೂದೆ ಅಂಗೀಕಾರವಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದೇ ವಿಷಯವಾಗಿ ಡಿ.16 ರಂದು ಮಧ್ಯಪ್ರದೇಶ ಸಚಿವ ಸಂಪುಟ ಮಸೂದೆಗೆ ಅನುಮೋದನೆ ನೀಡಿತ್ತು. ಇದೇ ಮಾದರಿಯ ಕಾನೂನು ಈಗಾಗಲೇ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶಗಳಲ್ಲಿ ಜಾರಿಯಲ್ಲಿದೆ.
Advertisement