ಮದುವೆ ತಂತ್ರಗಾರಿಕೆಯಿಂದ ಹಿಂದೂ ಹೆಣ್ಣುಮಕ್ಕಳು 'ಲವ್ ಜಿಹಾದ್'ಗೆ ಬಲಿಯಾಗುತ್ತಿದ್ದಾರೆ: ಮೆಟ್ರೋ ಮ್ಯಾನ್ ಶ್ರೀಧರನ್
ಮದುವೆ ಎಂಬ ಜಾಲವನ್ನು ಹೆಣೆದು ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಕೂಪಕ್ಕೆ ಒಳಪಡಿಸುತ್ತಿದ್ದಾರೆ ಎಂದು ಭಾರತದ 'ಮೆಟ್ರೋ' ಮ್ಯಾನ್ ಎಂದೇ ಖ್ಯಾತಿಗಳಿಸಿದ ಇ ಶ್ರೀಧರನ್ ಅವರು ಹೇಳಿದ್ದಾರೆ.
Published: 20th February 2021 11:25 AM | Last Updated: 20th February 2021 11:30 AM | A+A A-

ಮೆಟ್ರೋ ಮ್ಯಾನ್ ಇ ಶ್ರೀಧರನ್
ಕೊಚ್ಚಿ: ಮದುವೆ ಎಂಬ ಜಾಲವನ್ನು ಹೆಣೆದು ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಕೂಪಕ್ಕೆ ಒಳಪಡಿಸುತ್ತಿದ್ದಾರೆ ಎಂದು ಭಾರತದ 'ಮೆಟ್ರೋ' ಮ್ಯಾನ್ ಎಂದೇ ಖ್ಯಾತಿಗಳಿಸಿದ ಇ ಶ್ರೀಧರನ್ ಅವರು ಹೇಳಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ನಿನ್ನೆ ಬಿಜೆಪಿಗೆ ಸೇರ್ಪಡೆಯಾದ 88 ವರ್ಷದ ಶ್ರೀಧರನ್ ಅವರು, ಇಂದು ಕೇರಳದಲ್ಲಿನ ಲವ್ ಜಿಹಾದ್ ಕುರಿತಂತೆ ಮಾತನಾಡಿದ್ದು, ಮದುವೆ ಎಂಬ ತಂತ್ರಗಾರಿಕೆಯನ್ನು ಬಳಸಿಕೊಂದು ಹಿಂದೂ ಹೆಣ್ಣುಮಕ್ಕಳನ್ನು 'ಲವ್ ಜಿಹಾದ್' ಕೂಪಕ್ಕೆ ಒಳಪಡಿಸುತ್ತಿದ್ದಾರೆ. ಕೇರಳದ ಹಿಂದೂ ಹುಡುಗಿಯರನ್ನು ಮದುವೆ ಹೆಸರಲ್ಲಿ ಮೋಸ ಮಾಡುತ್ತಿರುವುದನ್ನು ನೋಡಿದ್ದರಿಂದ 'ಲವ್ ಜಿಹಾದ್' ಎಂಬ ಕಲ್ಪನೆಯನ್ನು ವಿರೋಧಿಸುತ್ತಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಒಂದರಲ್ಲಿ ಸುದ್ದಿಗಾರರು ಕೇಳಿದ ಲವ್ ಜಿಹಾದ್ ಕುರಿತಂತೆ ಮಾತನಾಡಿದ ಶ್ರೀಧರನ್ ಅವರು, 'ಹೌದು, ಕೇರಳದಲ್ಲಿ ಏನಾಗುತ್ತಿದೆ ಎಂಬುದನ್ನು ನಾನು ನೋಡುತ್ತಿದ್ದೇನೆ. ಮದುವೆ ಹೆಸರಿನಲ್ಲಿ ಹಿಂದೂಗಳನ್ನು ಹೇಗೆ ಮೋಸಗೊಳಿಸಲಾಗುತ್ತಿದೆ ಮತ್ತು ಅದರಿಂದ ಅವರು ಹೇಗೆ ಬಳಲುತ್ತಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಹಿಂದೂಗಳು, ಮುಸ್ಲಿಂ ಮಾತ್ರವಲ್ಲ, ಕ್ರಿಶ್ಚಿಯನ್ ಹುಡುಗಿಯರನ್ನು ಮದುವೆ ಹೆಸರಲ್ಲಿ ಮೋಸಗೊಳಿಸಲಾಗುತ್ತಿದೆ. ಈಗ ನಾನು ಖಂಡಿತವಾಗಿಯೂ ಆ ವಿಷಯವನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಉತ್ತರ ಪ್ರದೇಶ, ಮಧ್ಯ ಪ್ರದೇಶ ಸರ್ಕಾರಗಳು ಈಗಾಗಲೇ ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು ತಂದಿದ್ದು, ವಂಚನೆ, ಬಲಾತ್ಕಾರ ಅಥವಾ ವಿವಾಹದ ಮೂಲಕ ಮತಾಂತರಗಳನ್ನು ನಿಷೇಧಿಸಿವೆ.
ಇನ್ನು ದೆಹಲಿ ಮೆಟ್ರೋ ಮತ್ತು ಕೊಂಕಣ ರೈಲ್ವೆ ಯೋಜನೆ ನೇತೃತ್ವ ವಹಿಸಿ ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿದ್ದ 88 ವರ್ಷದ ಹಿರಿಯ ಎಂಜಿನಿಯರ್ ಇ ಶ್ರೀಧರನ್ ಅವರು ಅಧಿಕೃತವಾಗಿ ಕೇರಳ ರಾಜಕೀಯಕ್ಕೆ ಧುಮಕಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಪಕ್ಷದ ಚಟುವಟಿಕೆಗಳಲ್ಲಿ ತಲ್ಲೀನರಾಗಿರುವ ಅವರು, ಕೇರಳದಲ್ಲಿ ಬಿಜೆಪಿ ಗೆದ್ದರೆ ತಾವು ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಹೇಳಿದ್ದಾರೆ.