ಪುದುಚೇರಿಯಲ್ಲಿ ಹೈಡ್ರಾಮ: ವಿಶ್ವಾಸಮತ ಕಳೆದುಕೊಂಡ ಮುಖ್ಯಮಂತ್ರಿ ನಾರಾಯಣ ಸ್ವಾಮಿ, ಕಾಂಗ್ರೆಸ್ ಸರ್ಕಾರ ಪತನ
ಇಬ್ಬರು ಶಾಸಕರ ರಾಜಿನಾಮೆಯಿಂದ ಅಲ್ಪ ಮತಕ್ಕೆ ಕುಸಿದಿದ್ದ ಸಿಎಂ ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸಮತಯಾಚನೆಯಲ್ಲಿ ವಿಫಲವಾಗಿದ್ದು ಕಾಂಗ್ರೆಸ್ ಸರ್ಕಾರ ಪತನವಾಗಿದೆ.
Published: 22nd February 2021 11:50 AM | Last Updated: 22nd February 2021 12:37 PM | A+A A-

ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ
ಪುದುಚೇರಿ: ಇಬ್ಬರು ಶಾಸಕರ ರಾಜಿನಾಮೆಯಿಂದ ಅಲ್ಪ ಮತಕ್ಕೆ ಕುಸಿದಿದ್ದ ಸಿಎಂ ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸಮತಯಾಚನೆಯಲ್ಲಿ ವಿಫಲವಾಗಿದ್ದು ಕಾಂಗ್ರೆಸ್ ಸರ್ಕಾರ ಪತನವಾಗಿದೆ.
ನಾಲ್ಕು ಬಾರಿ ಕಾಂಗ್ರೆಸ್ ಶಾಸಕ ಲಕ್ಷ್ಮೀನಾರಾಯಣನ್ ಮತ್ತು ಡಿಎಂಕೆ ಶಾಸಕ ವೆಂಕಟೇಶನ್ ಅವರ ರಾಜಿನಾಮೆ ಬಳಿಕ ಅಲ್ಪಮತಕ್ಕೆ ಕುಸಿದಿದ್ದ ಸಿಎಂ ನಾರಾಯಣ ಸ್ವಾಮಿ ಸರ್ಕಾರ ಪತನವಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ರಾಜಿನಾಮೆ ನೀಡಿದ್ದ ಹಿನ್ನಲೆಯಲ್ಲಿ ಸರ್ಕಾರ ಅಲ್ಪಮತಕ್ಕೆ ಕುಸಿದ ಹಿನ್ನಲೆಯಲ್ಲಿ ಇಂದು ಸಿಎಂ ನಾರಾಯಣ ಸ್ವಾಮಿ ವಿಶ್ವಾಸ ಮತಯಾಚನೆ ಮಾಡಬೇಕಿತ್ತು. ಆದರೆ ಇಂದು ನಾಲ್ಕು ಬಾರಿ ಕಾಂಗ್ರೆಸ್ ಶಾಸಕ ಲಕ್ಷ್ಮೀನಾರಾಯಣನ್ ಮತ್ತು ಡಿಎಂಕೆ ಶಾಸಕ ವೆಂಕಟೇಶನ್ ಅವರ ರಾಜಿನಾಮೆಯಿಂದಾಗಿ ಪುದುಚೇರಿ ಕಾಂಗ್ರೆಸ್ ಸರ್ಕಾರ ಬಹುಮತವಿಲ್ಲದೇ ಪತನವಾಗಿದೆ.
ಈ ಕುರಿತಂತೆ ಇಂದು ನಡೆದ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಸ್ಪೀಕರ್ ಹೇಳುತ್ತಿದ್ದಂತೆಯೇ ವಿಧಾನಸಭೆಯಿಂದ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್ ಸದಸ್ಯರು ಹೊರನಡೆದರು. ಈ ಮೂಲಕ ಕಾಂಗ್ರೆಸ್ ಸರ್ಕಾರ ಪತನಗೊಂಡಿತು.
ಇದಕ್ಕೂ ಮೊದಲು ವಿಶ್ವಾಸಮತ ಯಾಚನೆಯ ಗೊತ್ತುವಳಿ ಮಂಡಿಸಿದ ಸಿಎಂ ನಾರಾಯಣಸ್ವಾಮಿ, ತಮ್ಮ ಸರ್ಕಾರಕ್ಕೆ ಬಹುಮತವಿದೆ ಎಂದು ವಿಧಾನಸಭೆಗೆ ತಿಳಿಸಿದರು. ಇದೇ ವೇಳೆ ಅವರು ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಆಡಳಿತಾತ್ಮಕ ವಿಷಯಗಳಲ್ಲಿ ಸರ್ಕಾರದೊಂದಿಗೆ ಬೇಡಿ ನಿರಂತರವಾಗಿ ಸಂಘರ್ಷಕ್ಕಿಳಿದರು. ಇದರ ಹೊರತಾಗಿಯೂ ಸರ್ಕಾರ ಕೋವಿಡ್ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಆದಾಯ ಉತ್ಪಾದನೆ ಸೇರಿದಂತೆ ಹಲವು ವಿಷಯಗಳಲ್ಲಿ ಬೇಡಿ ಅವರು ಸರ್ಕಾರದ ವಿರುದ್ಧ "ಸಂಚು ನಡೆಸಿದ್ದಾರೆ" ಎಂದು ನಾರಾಯಣ ಸ್ವಾಮಿ ಆರೋಪಿಸಿದ್ದರು.
'ಜನರಿಂದ ತಿರಸ್ಕಾರಕ್ಕೊಳಗಾದವರು ನಮ್ಮ ಸರ್ಕಾರವನ್ನು ಉರುಳಿಸಲು ಸಂಚು ನಡೆಸಿದ್ದಾರೆ. ಆದರೂ ನಮ್ಮ ಸರ್ಕಾರ ದೃಢವಾಗಿದೆ ಎಂದು ಅವರು ಹೇಳಿದರು.
ಇನ್ನು ಇಬ್ಬರು ಶಾಸಕರ ರಾಜೀನಾಮೆಯಿಂದಾಗಿ, 33 ಸದಸ್ಯರನ್ನೊಳಗೊಂಡ ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್–ಡಿಎಂಕೆ ಮೈತ್ರಿಕೂಟದ ಶಾಸಕರ ಸಂಖ್ಯೆ 11ಕ್ಕೆ ಕುಸಿದಿದೆ. ಆದರೆ, ವಿರೋಧ ಪಕ್ಷ 14 ಶಾಸಕರನ್ನು ಹೊಂದಿದೆ. ಏಳು ಸ್ಥಾನಗಳು ಖಾಲಿ ಉಳಿದಿವೆ. ಮಾಜಿ ಸಚಿವರಾದ ಎ.ನಮಶಿವಾಯಂ ಮತ್ತು ಮಲ್ಲಾಡಿ ಕೃಷ್ಣರಾವ್ ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನಮಶಿವಯಂ ಈಗಾಗಲೇ ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಶಾಸಕರನ್ನು ಈ ಮೊದಲೇ ಅನರ್ಹಗೊಳಿಸಲಾಗಿತ್ತು.