
ರವಿಶಂಕರ್ ಪ್ರಸಾದ್-ಪ್ರಕಾಶ್ ಜವಾಡೇಕರ್
ನವದೆಹಲಿ: ಒಟಿಟಿ ಪ್ಲಾಟ್ ಫಾರ್ಮ್ ಮತ್ತು ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರ ಪ್ರಕಟಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಓವರ್ ದಿ ಟಾಪ್ ಪ್ಲಾಟ್ಫಾರ್ಮ್(ಒಟಿಟಿ) ಮತ್ತು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ತಮ್ಮ ದುರುಪಯೋಗವನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದ್ದಾರೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳ ಅತಿರೇಕದ ದುರುಪಯೋಗ, ನಕಲಿ ಸುದ್ದಿಗಳ ಹರಡುವಿಕೆ, ಇತರ ಆತಂಕಗಳ ನಡುವೆ ಈ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಮಾಧ್ಯಮಗಳ ಸ್ವಾತಂತ್ರ್ಯ ಕಲಾವಿದರ ಸೃಜನಶೀಲತೆಗೆ ಕಡಿವಾಣ ಹಾಕುವ ಉದ್ದೇಶ ನಮಗಿಲ್ಲ. ಆದರೆ ಜವಾಬ್ದಾರಿಯೊಂದಿಗೆ ಎಲ್ಲರೂ ಸ್ವಾತಂತ್ರ್ಯ ಬಳಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಮಾಧ್ಯಮ ಯಾವುದೇ ಇದ್ದರೂ ಅದಕ್ಕೆ ಮಾರ್ಗದರ್ಶಿ ಸೂತ್ರಗಳು ಅಗತ್ಯ. ಇನ್ನು ಒಟಿಟಿ ವೇದಿಕೆಗಳನ್ನು ನ್ಯಾಯದಾನ ಪ್ರಕ್ರಿಯೆಯ ವ್ಯಾಪ್ತಿಯೊಳಗೆ ತರುವುದು ನಮ್ಮ ಉದ್ದೇಶ ಎಂದರು.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ:
* ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಬಳಕೆದಾರರ ಸ್ವಯಂಪ್ರೇರಿತ ಪರಿಶೀಲನೆಗೆ ಅವಕಾಶ ಹೊಂದಿರಬೇಕು.
* ಫೇಕ್ ನ್ಯೂಸ್ ಮಾಹಿತಿಯ ಮೊದಲು ಶೇರ್ ಮಾಡಿದವರ ವಿವರವನ್ನು ನ್ಯಾಯಾಲಯ ಅಥವಾ ಸರ್ಕಾರ ಕೇಳಿದರೆ ಸಾಮಾಜಿಕ ಮಾಧ್ಯಮ ವೇದಿಕೆಗಳು ನೀಡುವುದು ಅಗತ್ಯ.
* ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಕುಂದುಕೊರತೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ದೂರು ದಾಖಲಾದ 24 ಗಂಟೆಗಳಲ್ಲಿ ಆಕ್ಷೇಪಾರ್ಯ ವಿವರವನ್ನು ನಿಷ್ಕ್ರಿಯಗೊಳಿಸಬೇಕು. ಇನ್ನು ನೋಡಲ್ ಅಧಿಕಾರಿ ಭಾರತೀಯ ನಿವಾಸಿಯಾಗಿರಬೇಕು.
* ಸಾಮಾಜಿಕ ಮಾಧ್ಯಮ ವೇದಿಕೆಗಳು ಮಾಸಿಕ ಅನುಸರಣೆ ವರದಿಗಳನ್ನು ಸಲ್ಲಿಸಬೇಕಾಗುತ್ತದೆ.
* ಇದಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರ ನಗ್ನತೆ, ಮಾರ್ಫಡ್ ಚಿತ್ರಗಳನ್ನು ಒಳಗೊಂಡ ವಿಷಯವನ್ನು 24 ಗಂಟೆಗಳಲ್ಲಿ ತೆಗೆದುಹಾಕಬೇಕು.