ರ್ಯಾಲಿ ವೇಳೆ ಟ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದ ರೈತ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಿಂದ ಬಂದಿದ್ದ!
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ಪರೇಡ್ ವೇಳೆ ಟ್ರ್ಯಾಕ್ಟರ್ ಮಗುಚಿ ಮೃತಪಟ್ಟ ವ್ಯಕ್ತಿ ಆಸ್ಟ್ರೇಲಿಯಾದಿಂದ ತವರಿಗೆ ಮರಳಿದ್ದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
Published: 28th January 2021 12:42 AM | Last Updated: 28th January 2021 12:49 PM | A+A A-

ಟ್ರಾಕ್ಟರ್ ಮಗುಚಿ ರೈತ ಸಾವು
ನವದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ಪರೇಡ್ ವೇಳೆ ಟ್ರ್ಯಾಕ್ಟರ್ ಮಗುಚಿ ಮೃತಪಟ್ಟ ವ್ಯಕ್ತಿ ಆಸ್ಟ್ರೇಲಿಯಾದಿಂದ ತವರಿಗೆ ಮರಳಿದ್ದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ದೆಹಲಿಯ ಐಟಿಒ ರಸ್ತೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಗುದ್ದಿ ಟ್ರಾಕ್ಟರ್ ಮಗುಚಿ ರೈತ ಸಾವನ್ನಪ್ಪಿದ್ದ. ಮೃತ ರೈತನನ್ನು ಉತ್ತರ ಪ್ರದೇಶದ ರಾಮ್ಪುರದ 27 ವರ್ಷ ವಯಸ್ಸಿನ ನವರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ನವರೀತ್ ಸಿಂಗ್ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಮದುವೆಯ ಸಂಭ್ರಮಾಚರಣೆಗೆಂದು ತವರಿಗೆ ಬಂದಿದ್ದರು. ಬಳಿಕ ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸಿದ್ದರು. ಅವರ ಹುಟ್ಟೂರಿನಲ್ಲೀಗ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿದೆ.
ನವರೀತ್ ಸಿಂಗ್ ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿಯೇ ಮದುವೆಯಾಗಿದ್ದರು. ಆ ಪ್ರಯುಕ್ತ ಸಂಭ್ರಮಾಚರಣೆಗೆ ತವರಿಗೆ ಬಂದಿದ್ದರು. ಹೀಗೆ ಬಂದವರನ್ನು ಅವರ ಚಿಕ್ಕಪ್ಪಂದಿರು ಮನವೊಲಿಸಿ ಟ್ರ್ಯಾಕ್ಟರ್ ಪೆರೇಡ್ಗೆ ಕರೆದುಕೊಂಡು ಹೋಗಿದ್ದರು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.
ನಾವು ಜತೆಯಾಗಿಯೇ ರ್ಯಾಲಿಗೆ ತೆರಳಿದ್ದೆವು. ಆದರೆ, ಹೀಗಾಗಬಹುದು ಎಂದು ಭಾವಿಸಿರಲಿಲ್ಲ. ಎಂದು ನವರೀತ್ ಸಿಂಗ್ ಅವರ ನೆರೆಮನೆಯವರು ಖೇದ ವ್ಯಕ್ತಪಡಿಸಿದ್ದಾರೆ. ಸಿಂಗ್ ಅವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂಬ ವದಂತಿಗಳೂ ಮಂಗಳವಾರ ಹರಡಿದ್ದವು. ಆದರೆ, ಸಿಸಿಟಿವಿಯಲ್ಲಿ ಗುಂಡಿನ ದಾಳಿಯ ದೃಶ್ಯವಾಗಲೀ ಶಬ್ದವಾಗಲೀ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ನವರೀತ್ ಸಿಂಗ್ ಕೇಂದ್ರ ದೆಹಲಿಯ ಐಟಿಒದಲ್ಲಿ ಪೊಲೀಸ್ ಬ್ಯಾರಿಕೇಡ್ನತ್ತ ಟ್ರ್ಯಾಕ್ಟರ್ ನುಗ್ಗಿಸಿದ್ದರು. ಅಷ್ಟರಲ್ಲಿ ಅದು ಮಗುಚಿಬಿದ್ದು ಅದರಡಿ ಸಿಲುಕಿದ ಸಿಂಗ್ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿಯೇ ಮೃತದೇಹ ರಾಮ್ಪುರ ತಲುಪಿದ್ದು ಮರಣೊತ್ತರ ಪರೀಕ್ಷೆಯೂ ನಡೆದಿದೆ.