ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರದ ಹಿಂಸಾಚಾರ ಕುರಿತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಮಿಟಿಯ ಮಧ್ಯಂತರ ವರದಿಯನ್ನು ಗಮನಿಸಿದ ಕಲ್ಕತ್ತಾ ಹೈಕೋರ್ಟ್, ಎರಡನೇ ಬಾರಿಗೆ ಬಿಜೆಪಿ ಕಾರ್ಮಿಕ ವಿಭಾಗದ ಮುಖಂಡನ ಶವ ಪರೀಕ್ಷೆಗೆ ನಿರ್ದೇಶಿಸಿದೆ. ಆತನ ವಿರುದ್ಧ ನಿಂಧನಾ ವಿಚಾರಣೆಯನ್ನು ಏಕೆ ಪ್ರಾರಂಭಿಸಲಾಗಿಲ್ಲ ಎಂದು ಕೋಲ್ಕತಾ ಪೊಲೀಸರ ಉಪ ಆಯುಕ್ತರಿಗೆ ಶೋ-ಕಾಸ್ ನೋಟಿಸ್ ನೀಡಿದೆ.
ಕೊಲ್ಕತ್ತಾದಲ್ಲಿ ಚುನಾವಣಾ ನಂತರದ ಹಿಂಸಾಚಾರದಲ್ಲಿ ಬಿಜೆಪಿ ಟ್ರೇಡ್ ಯೂನಿಯನ್ ಮುಖಂಡನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪವಿದೆ. ರಾಜ್ಯದಲ್ಲಿನ ಚುನಾವಣಾ ನಂತರದ ಹಿಂಸಾಚಾರ ಆರೋಪಕ್ಕೆ ಸಂಬಂಧಿಸಿದ ಪಿಐಎಲ್ ಗಳ ಕುರಿತು ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ತನಿಖೆಗೆ ಇನ್ನೊಂದಿಷ್ಟು ಸಮಯ ಬೇಕೆಂದ ಸಮಿತಿಯ ಮನವಿಯನ್ನು ಒಪ್ಪಿಕೊಂಡಿತು.
ತದನಂತರ 2021 ರ ಜೂನ್ 18 ರಂದು ಈ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ನಿಂಧನೆ ವಿಚಾರಣೆಯನ್ನು ಏಕೆ ಪ್ರಾರಂಭಿಸಬಾರದು ಎಂಬ ಕಾರಣವನ್ನು ತೋರಿಸಲು ಕೊಲ್ಕತ್ತಾ ದಕ್ಷಿಣ ಹೊರವಲಯ ವಿಭಾಗದ ಡಿಸಿಪಿ ರಶೀದ್ ಮುನಿರ್ ಖಾನ್ ಅವರಿಗೆ ನೋಟಿಸ್ ನೀಡಿತು.
ನಗರ ಪೊಲೀಸರ ದಕ್ಷಿಣ ಉಪನಗರ ವ್ಯಾಪ್ತಿಗೆ ಬರುವ ಜಾದವ್ಪುರ ಪ್ರದೇಶದಲ್ಲಿ ಜೂನ್ 29 ರಂದು ತಮ್ಮ ತಂಡದ ಸದಸ್ಯರು ಗೂಂಡಾಗಳಿಂದ ಹಲ್ಲೆಗೊಳಗಾಗಿ ತಮ್ಮ ತಂಡದ ಸದಸ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಸಮಿತಿಯ ಸದಸ್ಯರಾದ ಅತಿಫ್ ರಶೀದ್ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿರುವುದನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ನಂತರದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಜೂನ್ 18 ರಂದು ಎನ್ಎಚ್ಆರ್ಸಿಗೆ ನಿರ್ದೇಶನ ನೀಡಿತು.
ಚುನಾವಣಾ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದರೆ, ಮತ್ತೆ ಕೆಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅಪ್ರಾಪ್ತ ಬಾಲಕಿಯರು ಸೇರಿದಂತೆ ಲೈಂಗಿಕವಾಗಿ ಮಾರಣಾಂತಿಕವಾಗಿ ಹಲ್ಲೆ ನಡೆದಿರುವುದಾಗಿ ಅರ್ಜಿದಾರರು ದೂರಿನಲ್ಲಿ ಆರೋಪಿಸಿದ್ದಾರೆ.
ಸಮಿತಿ ಎಲ್ಲಾ ಕೇಸ್ ಗಳನ್ನು ಪರಿಶೀಲನೆ ನಡೆಸಲಿದ್ದು, ಸದ್ಯದ ಪರಿಸ್ಥಿತಿಯ ಬಗ್ಗೆ ವಿಸ್ತೃತ ವರದಿಯೊಂದನ್ನು ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿತ್ತು.
Advertisement