ಕೇಂದ್ರ ಸಚಿವ ಸ್ಥಾನಕ್ಕೆ ಡಿವಿ ಸದಾನಂದಗೌಡ ರಾಜೀನಾಮೆ
ಇಂದು ನಡೆಯಲಿರುವ ಕೇಂದ್ರ ಸಂಪುಟ ಪುನಾರಚನೆಯಲ್ಲಿ ರಾಜ್ಯದಿಂದ ಇಬ್ಬರು ಅಥವಾ ನಾಲ್ವರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ. ಏತನ್ಮಧ್ಯೆ ಡಿ ವಿ ಸದಾನಂದಗೌಡ ಅವರು ರಾಸಾಯನಿಕ ಮತ್ತು ಗೊಬ್ಬರ ಖಾತೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Published: 07th July 2021 05:16 PM | Last Updated: 07th July 2021 06:55 PM | A+A A-

ಡಿ.ವಿ. ಸದಾನಂದಗೌಡ
ನವದೆಹಲಿ: ಇಂದು ನಡೆಯಲಿರುವ ಕೇಂದ್ರ ಸಂಪುಟ ಪುನಾರಚನೆಯಲ್ಲಿ ರಾಜ್ಯದಿಂದ ಇಬ್ಬರು ಅಥವಾ ನಾಲ್ವರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ. ಏತನ್ಮಧ್ಯೆ ಡಿ ವಿ ಸದಾನಂದಗೌಡ ಅವರು ರಾಸಾಯನಿಕ ಮತ್ತು ಗೊಬ್ಬರ ಖಾತೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯದಿಂದ ಎಷ್ಟು ಮಂದಿ, ಯಾರು ಯಾರು ಕೇಂದ್ರ ಸಚಿವ ಸ್ಥಾನಕ್ಕೆ ಆಯ್ಕಯಾಗುತ್ತಾರೆ ಎಂಬುದರ ಕುರಿತು ಅಧಿಕೃತ ಮಾಹಿತಿಯಿಲ್ಲವಾದರೂ, ಕೋವಿಡ್ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡ ಸುರೇಶ್ ಅಂಗಡಿ ಅವರ ಸ್ಥಾನಕ್ಕೆ ಭಗವಂತ್ ಖೂಬಾ ಹೆಸರು ಕೇಳಿಬರುತ್ತಿದೆ. ಹಾಗೆಯೇ, ಚಿತ್ರದುರ್ಗದ ಎಡಗೈ ದಲಿತ ಸಂಸದ ಎ ನಾರಾಯಣಸ್ವಾಮಿ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ನಾರಾಯಣ ಸ್ವಾಮಿ ಅವರು ತಮ್ಮ ಕುಟುಂಬ ಸಮೇತ ದೆಹಲಿಗೆ ದೌಡಾಯಿಸಿರುವುದು ಅವರಿಗೆ ಸಚಿವ ಸ್ಥಾನ ಸಿಗಲಿರುವ ಸುದ್ದಿಯನ್ನು ಪುಷ್ಟೀಕರಿಸುವಂತಿದೆ.
ಇನ್ನು, ರಾಜೀನಾಮೆ ನೀಡಿರುವ ಸದಾನಂದಗೌಡ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ಕೊಡಲು ಮೋದಿ ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿಯೂ ಇದೆ. ಇದಕ್ಕೆ ಇಂಬು ಕೊಡುವಂತೆ ಶೋಭಾ ಕರಂದ್ಲಾಜೆ ಅವರು ದೆಹಲಿಗೆ ಧಾವಿಸಿ ಅಲ್ಲಿ ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿರುವ ಖಚಿತ ಸುದ್ದಿ ಇದೆ.
ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಬಿಜೆಪಿ ಸಂಸದರಾಗಿ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಮತ್ತು ಬಿಎನ್ ಬಚ್ಚೇಗೌಡ ಇದ್ದಾರೆ. ಬಚ್ಚೇಗೌಡರಿಗೆ ವಯಸ್ಸಿನ ಕಾರಣಕ್ಕೆ ಸಚಿವ ಸ್ಥಾನ ಕೊಡುವುದು ಕಷ್ಟ. ಹೀಗಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಆಪ್ತರಾದ ಶೋಭಾ ಕರಂದ್ಲಾಜೆಯವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎಂಬ ಮಾತು ಕೇಳಿಬಂದಿದೆ.
ಇನ್ನು ಕೆಲವೇ ಗಂಟೆಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದ್ದು, ಪ್ರಧಾನಿ ನರೇಂದ್ರ ಅವರ ಹೊಸ ಮಂತ್ರಿಮಂಡಲದಲ್ಲಿ ಮಹಿಳೆಯರು, ಹಿಂದುಳಿದ ವರ್ಗ ಮತ್ತು ದಲಿತ ವರ್ಗಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.